ಕವಿಗೆ ಸಮಾಜದ ಡೊಂಕು ತಿದ್ದುವ ಅರಿವಿರಬೇಕು: ಶೂದ್ರ ಶ್ರೀನಿವಾಸ್

ಬೆಂಗಳೂರು, ಸೆ.8: ಕವಿಗೆ ಕವಿತೆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಹ ಅರಿವಿರಬೇಕು. ಜತೆಗೆ ಕವಿತೆ ಮೂಲಕ ಕೆಲವು ಮನಸುಗಳನ್ನು ತಿದ್ದುತ್ತಾ ಇದ್ದೇನೆ ಎಂಬ ಸೂಕ್ಷ್ಮ ಪ್ರಜ್ಞೆಯಿರಬೇಕು ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ರವಿವಾರ ಕಸಾಪದ ಕುವೆಂಪು ಸಭಾಂಗಣದಲ್ಲಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಸಾಹಿತಿ ತಾ.ಸಿ.ತಿಮ್ಮಯ್ಯರ 60ನೇ ಅಭಿನಂದನಾ ಸಂಭ್ರಮ ಹಾಗೂ ತಾ.ಸಿ.ತಿಮ್ಮಯ್ಯರ ನೆರಳು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಸಾಹಿತ್ಯದ ಬರಹವೂ ಸಾಹಿತಿಗಳ ಆಲೋಚನಾ ಕ್ರಮ ಹಾಗೂ ಪರಿಪೂರ್ಣತೆಯನ್ನು ತಿಳಿಸುತ್ತದೆ. ಸಮಾಜದ ಅಭಿವೃದ್ಧಿಗೆ ಸಾಹಿತಿಗಳು ಗುಣಾತ್ಮಕವಾಗಿ ತಾಳ್ಮೆಯಿಂದ ಕೆಲಸ ಮಾಡಬೇಕು. ಕುವೆಂಪು ಒಂದು ಮಾತು ಹೇಳಿದ್ದರು. ನೋಡಪ್ಪ, ಶ್ರೀನಿವಾಸ್ ಶೂದ್ರ ಎನ್ನುತ್ತಿರುವೆ. ಅನಗತ್ಯವಾಗಿ ಬ್ರಾಹ್ಮಣರ ವಿರುದ್ಧ ಬರೆಯಬೇಡ. ಆದರೆ ಬ್ರಾಹ್ಮಣರನ್ನು ಮೀರಿ ಬೆಳೆಯಬೇಕೆಂದು ಸಲಹೆ ನೀಡಿದ್ದರು ಎಂದು ನೆನೆದರು.
ನಾವು ನಮ್ಮ ಬದುಕಿಗೆ ಯಾವ ರೀತಿಯ ಸಾಹಿತ್ಯವನ್ನು ಓದಿಕೊಂಡು, ಅತ್ಯುತ್ತಮವಾದ ಸಾಹಿತ್ಯವನ್ನು ನಮ್ಮಳಗೆ ಬಿಟ್ಟುಕೊಳ್ಳುತ್ತೇವೋ ಅದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳತ್ತದೆ. ಸಾಹಿತ್ಯದ ಕುರಿತು ಅಲ್ಬರ್ಟ್ ಐನ್ಸ್ಟೀನ್ ಹೇಳುತ್ತಾರೆ. ವಿಜ್ಞಾನವನ್ನು ಎಲ್ಲರೂ ಓದಿಕೊಳ್ಳದಿದ್ದರೂ ಪರವಾಗಿಲ್ಲ. ಆದರೆ, ವಿಜ್ಞಾನಿ ಆದವನು ಅತ್ಯುತ್ತಮವಾದ ಸಾಹಿತ್ಯವನ್ನು ಓದಿಕೊಂಡಿರಬೇಕೆಂದು ತಿಳಿಸಿದ್ದರು ಎಂದರು.
ನೆರಳು ಎಂಬುದು ನಮ್ಮ ಬದುಕಿನ ಆಲೋಚನಾ ಕ್ರಮದ ಒಂದು ಪ್ರತಿರೂಪ. ಕವಿಗೆ ಸಾಹಿತ್ಯದ ಮೂಲಕ ಸಮಾಜವನ್ನು ಬದಲಾವಣೆ ಮಾಡುತ್ತೇನೆ ಎಂಬ ಅರಿವು ಇರಬೇಕು. ಇನ್ನು, ಕಡಿದಾಳು ಮಂಜಪ್ಪ ಮುಪ್ಪಿನ ಸಮಯದಲ್ಲೂ ವಕೀಲ ವೃತ್ತಿಯನ್ನು ಬಿಟ್ಟಿರಲಿಲ್ಲ. ಅಷ್ಟರ ಮಟ್ಟಿಗೆ ವೃತ್ತಿಯನ್ನು ಪಾಲಿಸುತ್ತಾ ಸಮಾಜದ ಏಳಿಗೆಗಾಗಿ ಬದುಕಿದ್ದರು. ಇದೇ ರೀತಿ ಅನೇಕ ಸರಕಾರಿ ಅಧಿಕಾರಿಗಳು ಹಾಗೂ ಸಾಹಿತಿಗಳು ಸಮಾಜಕ್ಕಾಗಿ ಬದುಕಿದ್ದರು ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಸಾಹಿತ್ಯದಿಂದ ಸಮಾಜದ ಬದಲಾವಣೆ ಸಾಧ್ಯವೇ? ಸಾಹಿತ್ಯದಿಂದ ಸಮಾಜವನ್ನು ತಿದ್ದುವುದು ಕಷ್ಟವಾಗಿದೆ. ಏಕೆಂದರೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ಇಲ್ಲಿಂದಲೇ ಆಲೋಚನೆಗಳು ಬದಲಾವಣೆಯಾಗಿ, ಮೌಲ್ಯಗಳನ್ನು ಬೆಳೆಸುವ ಮೊದಲ ಹಂತವಾಗಬೇಕು. ಪ್ರಸ್ತುತ ಸಮಾಜದ ಭದ್ರ ಬೇರುಗಳೇ ರೋಗಗ್ರಸ್ಥವಾಗಿವೆ. ಈ ರೋಗಗ್ರಸ್ಥ ಸಮಾಜಕ್ಕೆ ಕವಿ ಆದವನು ಏನು ಮಾಡಬಲ್ಲ ಎಂಬ ಕಾರ್ಯಕಲ್ಪ ಮಾಡಬೇಕಷ್ಟೇ ಎಂದು ತಿಳಿಸಿದರು.
ಕಾವ್ಯ ಒಂದು ಮಾಧ್ಯಮ. ಯಾವ ಸಾಹಿತಿ ಬರೆದರೂ ಸಾಕ್ಷಿ ಪ್ರಜ್ಞೆಯನ್ನು ಇಟ್ಟುಕೊಂಡೇ ಬರೆಯುತ್ತಾನೆ. ಅಲ್ಲಿ ಪ್ರಾಮಾಣಿಕತೆ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವು ಸಾಹಿತಿಯ ಕಣ್ಣ ಮುಂದೆ ಇರುತ್ತದೆ. ಟೀಕೆ ಮಾಡುವುದು ಸಾಹಿತಿಗಳ ಸ್ವಭಾವವಾಗಿದ್ದು, ಸಾಹಿತಿಯ ಬರಹಗಳಿಗಿಂತ ಅವರ ಬದುಕು ಶ್ರೇಷ್ಠವಾಗಿರಬೇಕು. ಆಗಲೇ ಸಮಾಜಕ್ಕೆ ಓಳ್ಳೆಯ ಮೌಲ್ಯಗಳನ್ನು ಸಾಹಿತಿ ಬಿಟ್ಟು ಹೋದಂತೆ ಆಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ತಾ.ಸಿ.ತಿಮ್ಮಯ್ಯ ದಂಪತಿಯನ್ನು ಅಭಿನಂದಿಸಲಾಯಿತು. ಈ ವೇಳೆ ಹಿರಿಯ ಸಾಹಿತಿ ತಾ.ನಂ.ಕುಮಾರಸ್ವಾಮಿ, ಸಾಹಿತಿಗಳಾದ ಡಾ.ಬೈರಮಂಗಲ ರಾಮೇಗೌಡ, ಡಾ.ಕೋ.ವೆಂ.ರಾಮಕೃಷ್ಣೇಗೌಡ ಉಪಸ್ಥಿತರಿದ್ದರು.
ದುಡ್ಡಿದವನನ್ನೇ ನಮ್ಮ ಸಂಸ್ಕತಿಯಲ್ಲಿ ಇಂದ್ರ, ಚಂದ್ರ ಹಾಗೂ ದೊಡ್ಡ ಮನುಷ್ಯ ಎಂದು ಹೇಳಲಾಗಿದೆ. ಇದು 5 ಸಾವಿರ ವರ್ಷಗಳಿಂದ ನಡೆದು ಬಂದ ಪ್ರಕ್ರಿಯೆ.
-ಡಾ.ದೊಡ್ಡರಂಗೇಗೌಡ, ಹಿರಿಯ ಸಾಹಿತಿ







