ಮಂಗಳೂರು: ಆವರಣ ಗೋಡೆ ಬಿದ್ದು ಇಬ್ಬರು ಮಕ್ಕಳು ಮೃತ್ಯು

ಮಂಗಳೂರು, ಸೆ.8: ಕರಾವಳಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಪಡೀಲ್ನ ಮನೆಯೊಂದರ ಆವರಣ ಗೋಡೆ ಬಿದ್ದು, ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಉಪ್ಪಿನಂಗಡಿ ಮೂಲದ ಹಾಗೂ ಪ್ರಸ್ತುತ ಪಡೀಲ್ನ ಶಿವನಗರದ ನಿವಾಸಿ ರಾಮಣ್ಣ ಎಂಬವರ ಮಕ್ಕಳಾದ ವರ್ಷಿಣಿ (9) ಹಾಗೂ ವೇದಾಂತಿ (7) ಮೃತ ಮಕ್ಕಳು.
ರಾಮಣ್ಣ ಕಣ್ಣೂರಿನ ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಪಡೀಲ್ನಲ್ಲಿ ವಾಸವಾಗಿದ್ದರು. ಮಂಗಳೂರು ನಗರದ ಕಪಿತಾನಿಯ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವರ್ಷಿಣಿ ಹಾಗೂ ಎರಡನೇ ತರಗತಿಯಲ್ಲಿ ವೇದಾಂತಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸೆ.9ರಂದು ಶಾಲೆಯಲ್ಲಿ ಪರೀಕ್ಷೆ ಇತ್ತು. ಪರೀಕ್ಷೆಯ ಸಿದ್ಧತೆಗಾಗಿ ಮನೆಯ ಆವರಣ ಗೋಡೆ ಸಮೀಪ ಮಕ್ಕಳು ಓದುತ್ತಿದ್ದರು. ರವಿವಾರ ರಾತ್ರಿ 7:50ರ ಸುಮಾರು ಆವರಣ ಗೋಡೆ ಬಿದ್ದಿದೆ. ಈ ವೇಳೆ ಪುಸ್ತಕ ಓದುತ್ತಿದ್ದ ಮಕ್ಕಳಿಬ್ಬರೂ ಮಣ್ಣಿನ ಕೆಳಗೆ ಸಿಲುಕಿದ್ದಾರೆ.
ತಕ್ಷಣವೇ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ತಂದೆ-ತಾಯಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










