ಹಸು ವಿಶ್ವಾಸದ ಪ್ರತೀಕ : ಮಧ್ಯಪ್ರದೇಶದ ಸಿಎಂ ಕಮಲನಾಥ್

ಭೋಪಾಲ, ಸೆ.8: ಹಸು ರಾಜಕೀಯದ ಸಂಕೇತವಲ್ಲ, ವಿಶ್ವಾಸದ ಪ್ರತೀಕವಾಗಿದೆ. ಹಸುವಿನ ರಕ್ಷಣೆ ಮತ್ತು ಪಾಲನೆ ತಮ್ಮ ಸರಕಾರದ ಪ್ರಧಾನ ಆದ್ಯತೆಯಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ಗೋಮಾತೆ ನಮಗೆಲ್ಲಾ ವಿಶ್ವಾಸದ ಪ್ರತೀಕ ಹಾಗೂ ಹೆಮ್ಮೆಯಾಗಿದ್ದಾಳೆ . ಹಸು ಬೀದಿಯಲ್ಲಿ ಅಲೆಯುವುದನ್ನು ತಪ್ಪಿಸಲು ಸರಕಾರ 1000 ಹಟ್ಟಿಗಳನ್ನು ನಿರ್ಮಿಸಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭೋಪಾಲದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಿರ್ಧಾರವನ್ನು ಹಲವು ಪ್ರಮುಖ ಯತಿಗಳೂ ಶ್ಲಾಘಿಸಿದ್ದಾರೆ. ಭವಿಷ್ಯದಲ್ಲಿ ಗೋಮಾತೆಯ ಸುರಕ್ಷತೆಯ ನಿಟ್ಟಿನಲ್ಲಿ ಇನ್ನಷ್ಟು ಯೋಜನೆ ರೂಪಿಸಲು ಇದು ಉತ್ತೇಜನ ನೀಡುತ್ತದೆ ಎಂದು ಹೇಳಿದರು. ಈ ಮಧ್ಯೆ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ನಂಬಿಕೆ ಎಂಬುದು ಏಕಶಿಲೆಯಲ್ಲ. ಮತದಾರರಿಗೆ ಮೃದು ಹಿಂದುತ್ವದ ಭರವಸೆ ನೀಡುವುದರಿಂದ ಪಕ್ಷಕ್ಕೆ ಹಿಂದಿ ಮಾತೃಭಾಷೆಯ ಪ್ರದೇಶದಲ್ಲಿ ಹೆಚ್ಚಿನ ಅನುಕೂಲವಾಗುವುದಿಲ್ಲ ಎಂದಿದ್ದಾರೆ. ನೀವು ಯಾವ ರೀತಿಯ ವಿಶ್ವಾಸವನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಬಹುದು. ಪ್ರಾರ್ಥನೆಯ ಯಾವ ಅಭಿವ್ಯಕ್ತಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಯಾವ ಪವಿತ್ರ ಗ್ರಂಥವನ್ನೂ ಆಯ್ಕೆಮಾಡಿಕೊಳ್ಳಬಹುದು. ಅದೇ ರೀತಿ, ನಿಮಗೆ ಸರಿಹೊಂದದ ಯಾವುದೇ ಕಲ್ಪನೆ, ಅಥವಾ ಬೇಡಿಕೆಯನ್ನು ತಿರಸ್ಕರಿಸಬಹುದಾಗಿದೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
Next Story