ಆಟೊಮೊಬೈಲ್ ಕ್ಷೇತ್ರದಲ್ಲಿಯ ಬಿಕ್ಕಟ್ಟು: ಅಶೋಕ್ ಲೇಲ್ಯಾಂಡ್ ನ 7 ಘಟಕಗಳು ಸ್ಥಗಿತ

ಹೊಸದಿಲ್ಲಿ,ಸೆ.9: ತನ್ನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ತನ್ನ ಏಳು ಘಟಕಗಳು 18 ದಿನಗಳವರೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಿವೆ ಎಂದು ವಾಣಿಜ್ಯ ವಾಹನಗಳ ಪ್ರಮುಖ ತಯಾರಿಕೆ ಕಂಪನಿ ಅಶೋಕ್ ಲೇಲ್ಯಾಂಡ್ ಸೋಮವಾರ ತಿಳಿಸಿದೆ.
ಉತ್ತರಾಖಂಡದ ಪಂತನಗರದಲ್ಲಿರುವ ಘಟಕವು ಸೆಪ್ಟಂಬರ್ನಲ್ಲಿ ಗರಿಷ್ಠ 18 ದಿನಗಳವರೆಗೆ ಕಾರ್ಯಾಚರಿಸುವುದಿಲ್ಲ. ಚೆನ್ನೈ ಬಳಿಯ ಎನ್ನೋರ್,ರಾಜಸ್ಥಾನದ ಆಲ್ವಾರ್, ಮಹಾರಾಷ್ಟ್ರದ ಭಂಡಾರಾ,ತಮಿಳುನಾಡಿನ ಹೊಸೂರು ಸೇರಿದಂತೆ ವಿವಿಧೆಡೆಗಳಲ್ಲಿರುವ ಕಂಪನಿಯ ಆರು ಘಟಕಗಳೂ 5 ದಿನಗಳಿಂದ ಹಿಡಿದು 16 ದಿನಗಳವರೆಗೆ ಉತ್ಪಾದನೆಯನ್ನು ಮಾಡುವುದಿಲ್ಲ ಎಂದು ಕಂಪನಿಯು ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಪ್ರಕಟಿಸಿದೆ.
ಬಸ್ ಗಳು ಸೇರಿದಂತೆ ಅಶೋಕ್ ಲೇಲ್ಯಾಂಡ್ ತಯಾರಿಸುವ ಎಲ್ಲ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಮಾರಾಟ ಸಂಖ್ಯೆಯು ಕಳೆದ ಆಗಸ್ಟ್ನಲ್ಲಿ 4,585ಕ್ಕೆ ಕುಸಿದಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ ಕಂಪನಿಯು 12,420 ವಾಹನಗಳನ್ನು ಮಾರಾಟ ಮಾಡಿದ್ದು,ಈಗ ಅದು ಶೇ.63ರಷ್ಟು ಕುಸಿದಿದೆ. ಲಘು ವಾಣಿಜ್ಯ ವಾಹನಗಳ ಮಾರಾಟದಲ್ಲಿಯೂ ಶೇ.12ರಷ್ಟು ಕುಸಿತವಾಗಿದ್ದು, 3,711 ವಾಹನಗಳು ಮಾರಾಟವಾಗಿವೆ. 2018,ಆಗಸ್ಟ್ನಲ್ಲಿ 16,628ರಷ್ಟಿದ್ದ ಕಂಪನಿಯ ಒಟ್ಟೂ ವಾಹನಗಳ ಮಾರಾಟ ಸಂಖ್ಯೆ ಈ ವರ್ಷದ ಆಗಸ್ಟ್ನಲ್ಲಿ ಶೇ.50ರಷ್ಟು ಕುಸಿದು 8,296 ವಾಹನಗಳಿಗೆ ಇಳಿದಿದೆ.
ದೇಶದಲ್ಲಿ ಆಟೊಮೊಬೈಲ್ ಕ್ಷೇತ್ರವು ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು,ಪ್ರಮುಖ ಕಾರು ತಯಾರಿಕೆ ಕಂಪನಿ ಮಾರುತಿ ಸುಝುಕಿ ತನ್ನ ಗುರುಗ್ರಾಮ ಮತ್ತು ಮನೇಸರ್ ಘಟಕಗಳನ್ನು ಸೆ.7ರಿಂದ ಸೆ.9ರವರೆಗೆ ಮುಚ್ಚುವುದಾಗಿ ಕಳೆದ ವಾರ ಪ್ರಕಟಿಸಿತ್ತು.
ಜುಲೈನಲ್ಲಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.30.9ರಷ್ಟು ಕುಸಿದಿತ್ತು. ಕಳೆದ ತ್ರೈಮಾಸಿಕದಲ್ಲಿ ಆಟೊಮೊಬೈಲ್ ಕ್ಷೇತ್ರದಲ್ಲಿ 15,000 ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದು,ಕಳೆದ 18 ತಿಂಗಳುಗಳಲ್ಲಿ ಸುಮಾರು 300 ವಾಹನ ವಿತರಣೆ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.
ಜಿಎಸ್ಟಿ ಕಡಿತದ ಕುರಿತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ಸೇರಿದಂತೆ ಆಟೊಮೊಬೈಲ್ ಕ್ಷೇತ್ರಕ್ಕೆ ಸರಕಾರದಿಂದ ಅಗತ್ಯವಿರುವ ಎಲ್ಲ ನೆರವುಗಳ ಬಗ್ಗೆ ಕೇಂದ್ರ ಸಚಿವ ನಿತಿನ ಗಡ್ಕರಿ ಅವರು ಕಳೆದ ವಾರ ಭರವಸೆ ನೀಡಿದ್ದರು.