ಆರ್ಥಿಕ ಪ್ರಗತಿಯ ಮಂದಗತಿಗೆ ನೋಟು ರದ್ದತಿ ಮೂಲಕಾರಣ: ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣಬ್ ಸೇನ್

ಹೊಸದಿಲ್ಲಿ, ಸೆ.9: ಕೇಂದ್ರ ಸರಕಾರ 2016ರಲ್ಲಿ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದು ಮಾಡಿರುವುದು ಈಗಿನ ಆರ್ಥಿಕ ಪ್ರಗತಿಯ ಮಂದಗತಿಗೆ ಮೂಲ ಕಾರಣ ಎಂದು ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಡಾ. ಪ್ರಣಬ್ ಸೇನ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಮಂದಗತಿ ಭಾರತದ ಸಮಸ್ಯೆಗೆ ಪೂರಕ ಕಾರಣವಾಗಿದೆಯಷ್ಟೇ. ಆದರೆ ಮುಖ್ಯ ಕಾರಣ ನೋಟು ರದ್ದತಿಯ ಕ್ರಮ ಎಂದವರು ಹೇಳಿದ್ದಾರೆ. ಡಾ. ಸೇನ್ ಈಗ ಇಂಟರ್ನ್ಯಾಷನಲ್ ಗ್ರೋತ್ ಪ್ರೋಗ್ರಾಂನ ಭಾರತ ವಿಭಾಗದ ನಿರ್ದೇಶಕರಾಗಿದ್ದಾರೆ. ಕೃಷಿ ಉತ್ಪನ್ನಗಳನ್ನು ಖರೀದಿಸುವ ಸ್ಥಳೀಯ ವ್ಯಾಪಾರಿಗಳು ನಗದಿನ ಕೊರತೆಯಿಂದ ಖರೀದಿಸಲು ಅಸಮರ್ಥರಾದರು. ನೋಟು ರದ್ದತಿಯ ತಕ್ಷಣದ ಪರಿಣಾಮ ಕೃಷ್ಯುತ್ಪನ್ನಗಳ ಮೇಲಾಯಿತು. ಆದ್ದರಿಂದ ರೈತರು ತಮ್ಮ ಕೃಷಿ ಉತ್ಪನ್ನದ ಅರ್ಧಾಂಶದಷ್ಟನ್ನು ಬೀದಿಗೆಸೆಯಬೇಕಾಯಿತು. ಅಲ್ಲದೆ ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರುವ ಅನಿವಾರ್ಯತೆ ಎದುರಾಯಿತು. ಈಗ ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗೆ ಇದು ಮೂಲ ಕಾರಣವಾಗಿದೆ . ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಕೆಲಸವಿಲ್ಲದ ಅಥವಾ ಕಡಿಮೆ ಕೆಲಸಕ್ಕೆ ದುಡಿಯುವ ಅನಿವಾರ್ಯತೆ ಎದುರಾಯಿತು ಎಂದು ಸೇನ್ ಹೇಳಿದ್ದಾರೆ.
ದೇಶದ ಜನಸಂಖ್ಯೆಯ ಶೇ.70ರಷ್ಟು ಗ್ರಾಮೀಣ ಪ್ರದೇಶದಲ್ಲಿದ್ದು, ದೇಶದಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಸರಕು ಸಾಗಣೆ ಕುಸಿದ ಕಾರಣ ಲಾರಿ ಹಾಗೂ ವಾಣಿಜ್ಯ ವಾಹನಗಳಿಗೆ ಬೇಡಿಕೆ ಕುಸಿದಿದೆ ಎಂದವರು ವಿವರಿಸಿದ್ದಾರೆ. ನೋಟು ರದ್ದತಿಯ ಬಳಿಕ ಜನತೆ ಹೆಚ್ಚಿನ ಪ್ರಮಾಣದಲ್ಲಿ ನಗದನ್ನು ಬ್ಯಾಂಕಿನಿಂದ ಹಿಂಪಡೆಯಲು ಹೆದರುವಂತಾಯಿತು. ಉದ್ಯಮ ಹಾಗೂ ಕೈಗಾರಿಕೆಗಳಿಗೆ ಬ್ಯಾಂಕ್ ಸಾಲದ ರೂಪದಲ್ಲಿ ಮತ್ತು ರೈತರು ಸೇರಿದಂತೆ ಅಸಾಂಪ್ರದಾಯಿಕ ವಲಯದವರಿಗೆ ನಗದು ರೂಪದಲ್ಲಿ ಹಣದ ಅಗತ್ಯವಿದೆ. ಕಾರ್ಪೊರೇಟ್ ವಲಯಗಳು ಹಣ ಹೂಡಲು ಹಿಂಜರಿಯುವಂತಾಗಿದೆ. ಜಾಗತಿಕ ಆರ್ಥಿಕತೆಯಲ್ಲೂ ಮಂದಗತಿ ಇರುವ ಕಾರಣ ಭಾರತದ ರಫ್ತು ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಹಣ ಒದಗಿಸಿದರೆ ಬೇಡಿಕೆ ವರ್ಧಿಸುತ್ತದೆ ಹಾಗೂ ಆರ್ಥಿಕತೆಗೆ ಹೆಚ್ಚಿನ ವೇಗ ದೊರಕುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಉತ್ತಮ ಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ, ಗ್ರಾಮೀಣ ವಸತಿ ಯೋಜನೆ ಮುಂತಾದ ಯೋಜನೆಗಳಿಂದ ಗ್ರಾಮೀಣ ಜನರಿಗೆ ಉದ್ಯೋಗದ ಜೊತೆಗೆ ಖರ್ಚು ಮಾಡುವ ಸಾಮರ್ಥ್ಯ ದೊರಕುತ್ತದೆ. ಎಂನರೇಗಾ(ಉದ್ಯೋಗ ಖಾತರಿ ಯೋಜನೆ) ಕೂಡಾ ಗ್ರಾಮೀಣ ಆದಾಯ ಹೆಚ್ಚಿಸಲು ಸಹಕಾರಿ ಎಂದವರು ಅಭಿಪ್ರಾಯಪಟ್ಟರು.