ಅಬಕಾರಿ ಸುಂಕ ಜಿಎಸ್ಟಿ ವ್ಯಾಪಿಗೆ: ಸಂಜಯ್ ಪಂತ್
ನೂತನ ‘ಸಬ್ಕಾ ವಿಶ್ವಾಸ್- ಲೆಗೆಸಿ ಡಿಸ್ಪ್ಯೂಟ್ ರೆಸಲ್ಯೂಷನ್ ಸ್ಕಿಮ್’ ಆರಂಭ

ಮಂಗಳೂರು, ಸೆ.12: ಸೇವಾ ತೆರಿಗೆ ಮತ್ತು ಅಬಕಾರಿ ಸುಂಕವನ್ನು ಜಿಎಸ್ಟಿ ವ್ಯಾಪ್ತಿಯಡಿಗೆ ತರಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರ ‘ಸಬ್ಕಾ ವಿಶ್ವಾಸ್- ಲೀಗಸಿ ಡಿಸ್ಪ್ಯೂಟ್ ರೆಸಲ್ಯೂಷನ್ ಸ್ಕಿಮ್’ ಆರಂಭಿಸಿದೆ ಎಂದು ಕೇಂದ್ರ ತೆರಿಗೆ ಮಂಗಳೂರು ಪ್ರಧಾನ ಆಯುಕ್ತ ಸಂಜಯ್ ಪಂತ್ ಹೇಳಿದರು.
ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಗುರುವಾರ ಬಂದರ್ನ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಲಾದ ‘ಸಬ್ಕಾ ವಿಶ್ವಾಸ್ ಲೀಗಸಿ ಡಿಸ್ಪ್ಯೂಟ್ ರೆಸೊಲ್ಯೂಷನ್ ಸ್ಕೀಮ್’ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ಕೇಂದ್ರ ತೆರಿಗೆ ಇಲಾಖೆ ಕಚೇರಿಯಲ್ಲಿ ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲ ಸಹಕಾರ ನೀಡಲಾಗುತ್ತದೆ. ಡಿ.31ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಆರು ಪ್ರಕರಣಗಳು ದಾಖಲಾಗಿವೆ. ಇಂತಹ ಅವಕಾಶ ನೀಡುವ ಮೂಲಕ ಸರಕಾರ ಉದಾರತೆ ತೋರಿಸಿದೆ ಎಂದರು.
ಕೇಂದ್ರ ತೆರಿಗೆ ಮಂಗಳೂರು ಸಹಾಯಕ ಆಯುಕ್ತ ಪ್ರವೀಣ್ ಕಂಡಿ, ಸಬ್ಕಾ ವಿಶ್ವಾಸ್- ಲೆಗೆಸಿ ಡಿಸ್ಪ್ಯೂಟ್ ರೆಸಲ್ಯೂಷನ್ ಸ್ಕಿಮ್ನಲ್ಲಿ ಯಾವ ರೀತಿ ಅರ್ಜಿ ಸಲ್ಲಿಸುವುದು, ಸಲ್ಲಿಸಿದ ಮುಂದೇನಾಗುತ್ತದೆ ಎನ್ನುವುದರ ಕುರಿತ ತಾಂತ್ರಿಕ ಮಾಹಿತಿ ನೀಡಿದರು.
ಕೆಸಿಸಿಐ ಉಪಾಧ್ಯಕ್ಷ ಐಸಾಕ್ ವಾಸ್ ಸ್ವಾಗತಿಸಿದರು. ಕಾರ್ಯದರ್ಶಿ ಶಶಿಧರ್ ಪೈ ಮಾರೂರು ಪರಿಚಯಿಸಿದರು. ಕಾರ್ಯದರ್ಶಿ ಪ್ರಶಾಂತ್ ಸಿ.ಜಿ. ವಂದಿಸಿದರು.






.jpg)
.jpg)

