ಉಡುಪಿ: ಹೆದ್ದಾರಿ ಬದಿ ಟೆಂಟ್ನಲ್ಲಿ ವಾಸವಿದ್ದ ಕುಟುಂಬಗಳ ರಕ್ಷಣೆ

ಉಡುಪಿ, ಸೆ.12: ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್ಗಳಲ್ಲಿ ವಾಸವಾಗಿರುವ, ಮೂಲತ ಗದಗದ ಏಳು ಮಂದಿ ಕೂಲಿ ಕಾರ್ಮಿಕರನ್ನು ಒಳಗೊಂಡಂತೆ 12 ಮಕ್ಕಳನ್ನು ರಕ್ಷಿಸಲು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಮತ್ತು ನಗರ ಪೊಲೀಸ್ ಠಾಣೆ ಇವರು ಜಂಟಿ ಕಾರ್ಯಾಚರಣೆ ನಡೆಸಿದರು.
ಇವರಲ್ಲಿ ಇಬ್ಬರು ಮಕ್ಕಳು ಕಾಡಬೆಟ್ಟು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಮಕ್ಕಳು ರಸ್ತೆ ಬದಿಗೆ ಆಟವಾಡಲು ಬರುತ್ತಿದ್ದರು. ವಾಹನ ಸಂಚಾರದ ವೇಳೆ ಆಕಸ್ಮಾತ್ತಾಗಿ ಅವಘಡ ಸಂಭಸುವ ಸಾಧ್ಯತೆ ಇರುವುದರಿಂದ ಅಲ್ಲಿಂದ ಬೇರೆ ಕಡೆಗೆ ಟೆಂಟನ್ನು ವರ್ಗಾಯಿಸುವಂತೆ ಸೂಚಿಸಿ, ಅವರಿಗೆ ಅನುಕೂಲಕರ ಮತ್ತು ಮಕ್ಕಳ ರಕ್ಷಣೆ ಹಿನ್ನೆಲೆಯಲ್ಲಿ ನಿಟ್ಟೂರಿನಲ್ಲಿ ರಸ್ತೆಗೆ ಸ್ವಲ್ಪ ದೂರವಿರುವ ಜಾಗದಲ್ಲಿ ಟೆಂಟ್ನ್ನು ಕಟ್ಟಿಕೊಳ್ಳುವಂತೆ ಸ್ಥಳವನ್ನು ತೋರಿಸಿ, 3 ದಿನಗಳ ಕಾಲಾವಕಾಶವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ ಮತ್ತು ಕಾನೂನು ಪರೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತರಾದ ಯೋಗೀಶ್ ಮತ್ತು ಗ್ಲೀಶಾ ಮೊಂತೆರೋ ಅಲ್ಲದೇ ಉಡುಪಿ ನಗರ ಠಾಣೆಯ ಪೊಲೀಸ್ ಜಿ.ಎಸ್ ಶಿವಮಠ್ ಭಾಗವಹಿಸಿದ್ದರು.









