ಐಎನ್ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ಸಲ್ಲಿಸಿದ್ದ ಅರ್ಜಿ ದಿಲ್ಲಿ ನ್ಯಾಯಾಲಯದಲ್ಲಿ ವಜಾ

ಹೊಸದಿಲ್ಲಿ,ಸೆ.13: ಸಿಬಿಐ ತನಿಖೆ ನಡೆಸುತ್ತಿರುವ ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ ಇಲ್ಲಿಯ ತಿಹಾರ ಜೈಲಿನಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶರಣಾಗುವುದಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ವಿಶೇಷ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಬಂಧನವು ಅಗತ್ಯವಾಗಿದೆ ಮತ್ತು ಸೂಕ್ತ ಸಮಯದಲ್ಲಿ ತಾನು ಆ ಕಾರ್ಯವನ್ನು ಮಾಡುವುದಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಗುರುವಾರ ನ್ಯಾಯಾಲಯಕ್ಕೆ ತಿಳಿಸಿತ್ತು.
ಈ.ಡಿ.ಹೇಳಿಕೆಯು ದುರುದ್ದೇಶದಿಂದ ಕೂಡಿದೆ ಮತ್ತು ತನ್ನ ಕಕ್ಷಿದಾರರನ್ನು ಸತಾಯಿಸಲು ಅದು ಬಯಸಿದೆ ಎಂದು ಚಿದಂಬಂರಂ ಪರ ಹಿರಿಯ ವಕೀಲ ಕಪಿಲ ಸಿಬಲ್ ಅವರು ವಾದಿಸಿದ್ದರು.
ಚಿದಂಬರಂ ಈಗಾಗಲೇ ಸಿಬಿಐ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರು ಸಾಕ್ಷ್ಯನಾಶ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಈ.ಡಿ.ನ್ಯಾಯಾಲಯಕ್ಕೆ ತಿಳಿಸಿತ್ತು.
ಚಿದಂಬರಂ ಅವರನ್ನು ಬಂಧಿಸಲು ಈ.ಡಿ.ಅಧಿಕಾರಿಗಳು ಆ.20 ಮತ್ತು 21ರಂದು ಅವರ ನಿವಾಸಕ್ಕೆ ತೆರಳಿದ್ದರು ಮತ್ತು ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯುವಂತಾಗಲು ಈಗ ಅವರನ್ನು ಬಂಧಿಸಲು ಬಯಸುತ್ತಿಲ್ಲ ಎಂದು ಸಿಬಲ್ ಹೇಳಿದ್ದರು.
ಚಿದಂಬರಂ ಅವರ ಕಸ್ಟಡಿ ವಿಚಾರಣೆಗೆ ಮುನ್ನ ಆರು ಜನರನ್ನು ವಿಚಾರಣೆಗೊಳಪಡಿಸಬೇಕಿದೆ ಮತ್ತು ದೇಶದಿಂದಾಚೆಗೂ ವ್ಯಾಪಿಸಿರುವ ಅಕ್ರಮ ಹಣ ವರ್ಗಾವಣೆಯ ಬಗ್ಗೆ ತಾನು ತನಿಖೆ ನಡೆಸುತ್ತಿದ್ದೇನೆ. ಆರೋಪಿಯು ತನಿಖೆ ಹೀಗೆಯೇ ನಡೆಯಬೇಕು ಎಂದು ಹೇಳುವಂತಿಲ್ಲ ಮತ್ತು ಈಗಲೇ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರೆ ಅದು ತನ್ನ ವಿವೇಚನಾಧಿಕಾರಕ್ಕೆ ಚ್ಯುತಿಯನ್ನುಂಟು ಮಾಡುತ್ತದೆ ಎಂದು ವಾದಿಸಿದ್ದ ಈ.ಡಿ.,ಆ.21ಕ್ಕೆ ಮುನ್ನ ಚಿದಂಬರಂ ಅವರನ್ನು ಬಂಧಿಸಲು ತನ್ನ ಬಳಿ ಕಾರಣಗಳಿದ್ದವು ಮತ್ತೂ ಈಗಲೂ ಇವೆ.
ಚಿದಂಬರಂ ಅವರನ್ನು ಬಂಧಿಸಿದ ಬಳಿಕ ತಾನು ಸಂಗ್ರಹಿಸಿದ ಸಾಕ್ಷಾಧಾರಗಳೊಂದಿಗೆ ಅವರನ್ನು ಮುಖಾಮುಖಿಯಾಗಿಸಲು ತಾನು ಬಯಸಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.