ಆಧಾರ್ನೊಂದಿಗೆ ಸಾಮಾಜಿಕ ಜಾಲತಾಣ ಖಾತೆಗಳ ಜೋಡಣೆ ವಿಷಯ ಶೀಘ್ರ ನಿರ್ಧರಿಸಬೇಕಿದೆ: ಸುಪ್ರೀಂ

ಹೊಸದಿಲ್ಲಿ,ಸೆ.13: ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ಗಳನ್ನು ಆಧಾರ್ನೊಂದಿಗೆ ಜೋಡಣೆಗೊಳಿಸುವ ವಿಷಯವನ್ನು ಶೀಘ್ರವಾಗಿ ನಿರ್ಧರಿಸುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.
‘ಈ ವಿಷಯವನ್ನು ನಾವು ನಿರ್ಧರಿಸಲಿದ್ದೆವೋ ಅಥವಾ ಉಚ್ಚ ನ್ಯಾಯಾಲಯ ನಿರ್ಧರಿಸುತ್ತದೆಯೇ ಎನ್ನುವುದು ಈ ಹಂತದಲ್ಲಿ ನಮಗೆ ತಿಳಿದಿಲ್ಲ ’ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ಪೀಠವು ಹೇಳಿತು.
ಪ್ರಕರಣದ ಅರ್ಹತೆಯನ್ನು ಪರಿಶೀಲಿಸುವ ಗೋಜಿಗೆ ತಾನು ಹೋಗುವುದಿಲ್ಲ ಹಾಗೂ ಮದ್ರಾಸ್,ಬಾಂಬೆ ಮತ್ತು ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಫೇಸ್ಬುಕ್ ಸಲ್ಲಿಸಿರುವ ಅರ್ಜಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಪೀಠವು ತಿಳಿಸಿತು.
ಪ್ರಕರಣಗಳನ್ನು ಉಚ್ಚ ನ್ಯಾಯಾಲಯಗಳಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸುವುದಕ್ಕೆ ಕೇಂದ್ರದ ಆಕ್ಷೇಪವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.
ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತೀಯ ಕಾನೂನುಗಳನ್ನು ಪಾಲಿಸುತ್ತಿಲ್ಲ ಮತ್ತು ಇದರಿಂದಾಗಿ ಕಾನೂನುಬಾಹಿರ ಘಟನೆಗಳು ಹೆಚ್ಚುತ್ತಿವೆ ಮತ್ತು ಅಪರಾಧಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿದ್ದ ತಮಿಳುನಾಡು ಸರಕಾರವು,ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಷ್ಕರಿಸುವಂತೆ ಕೋರಿತ್ತು. ಆ.20ರಂದು ಹೊರಡಿಸಿದ್ದ ಈ ಆದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಖಾತೆಗಳೊಂದಿಗೆ ಆಧಾರ್ ಜೋಡಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಮುಂದುವರಿಸುವಂತೆ ನಿರ್ದೇಶ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು,ಯಾವುದೇ ಪರಿಣಾಮಕಾರಿ ಆದೇಶ ಹೊರಡಿಸುವುದನ್ನು ನಿರ್ಬಂಧಿಸಿತ್ತು.
ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯು ಕೊನೆಯ ಹಂತದಲ್ಲಿದೆ,ಆದರೆ ಸರ್ವೋಚ್ಚ ನ್ಯಾಯಾಲಯದ ಆ.20ರ ಆದೇಶದಿಂದಾಗಿ ಅದು ವಿಚಾರಣೆಯನ್ನು ಮುಂದೂಡಿದೆ ಎಂದು ತಮಿಳುನಾಡು ಸರಕಾರವು ತಿಳಿಸಿತ್ತು.
ವಿವಿಧ ಅಪರಾಧ ಪ್ರಕರಣಗಳನ್ನು ಪ್ರಸ್ತಾಪಿಸಿದ್ದ ಅದು,ಹಲವಾರು ಸಂದರ್ಭಗಳಲ್ಲಿ ಅಪರಾಧಗಳ ತನಿಖೆ ಮತ್ತು ಪತ್ತೆಗಾಗಿ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಕಂಪನಿಗಳಿಂದ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ ಈ ಕಂಪನಿಗಳು ಭಾರತದ ನೆಲದಲ್ಲಿ ಕಾರ್ಯಾಚರಿಸುತ್ತಿದ್ದರೂ ಮಾಹಿತಿಗಾಗಿ ನ್ಯಾಯಾಲಯದ ಮೂಲಕ ಮನವಿ ಪತ್ರಗಳನ್ನು ಕಳುಹಿಸುವಂತೆ ಸೂಚಿಸಿವೆ ಮತ್ತು ಸಂಪೂರ್ಣ ಮಾಹಿತಿಯನ್ನು ಒದಗಿಸುವಲ್ಲಿ ವಿಫಲಗೊಂಡಿವೆ ಎಂದು ಹೇಳಿತ್ತು.