ಮಹಾರಾಷ್ಟ್ರ ಮಾದರಿಯಲ್ಲಿ ವಾರ್ ರೂಮ್ ವ್ಯವಸ್ಥೆ: ಡಾ.ಅಶ್ವಥ ನಾರಾಯಣ್
![ಮಹಾರಾಷ್ಟ್ರ ಮಾದರಿಯಲ್ಲಿ ವಾರ್ ರೂಮ್ ವ್ಯವಸ್ಥೆ: ಡಾ.ಅಶ್ವಥ ನಾರಾಯಣ್ ಮಹಾರಾಷ್ಟ್ರ ಮಾದರಿಯಲ್ಲಿ ವಾರ್ ರೂಮ್ ವ್ಯವಸ್ಥೆ: ಡಾ.ಅಶ್ವಥ ನಾರಾಯಣ್](https://www.varthabharati.in/sites/default/files/images/articles/2019/09/13/209864-1568392376.jpg)
ಬೆಂಗಳೂರು, ಸೆ.13: ಯಾವುದೇ ಸರಕಾರಿ ಯೋಜನೆಯನ್ನು ಜಾರಿಗೊಳಿಸಲು ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಲು ಒಂದು ವಿಶೇಷ ವಾರ್ ರೂಮ್ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು ಅದನ್ನು ಅಭ್ಯಸಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಿಯೋಗವೊಂದು ಮುಂಬೈಗೆ ಕಳುಹಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದರು.
ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ 42 ಕಿ ಮೀ ಮೆಟ್ರೋ ರಸ್ತೆ ನಿರ್ಮಾಣವಾಗಿದ್ದು, ದೆಹಲಿ ಮೆಟ್ರೋದಲ್ಲಿ ಕಳೆದ ಏಳು ವರ್ಷಗಳಲ್ಲಿ 210 ಕಿ.ಮೀ.ರಸ್ತೆ ನಿರ್ಮಾಣವಾಗಿದೆ. ಮೆಟ್ರೋ ಮಾರ್ಗವನ್ನು ತ್ವರಿತ ಗತಿಯಲ್ಲಿ ನಿರ್ಮಿಸಲು ಹಾಗೂ ಬೆಂಗಳೂರು ಮೆಟ್ರೋ ಎದುರಿಸುತ್ತಿರುವ ತೊಂದರೆಗಳ ಬಗ್ಗೆಯೂ ಕೂಲಂಕಷವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಮೆಟ್ರೋರೈಲು ನಿಗಮದ ಅಧ್ಯಕ್ಷ ಅಜಯ್ ಸೇಠ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.