ನಮ್ಮಲ್ಲಿ ಮೊದಲು ಸಂಸ್ಕೃತಿ ಅಳವಡಿಕೆಯಾಗಲಿ: ಡಿ.ವಿ.ಸದಾನಂದಗೌಡ

ಬೆಂಗಳೂರು, ಸೆ.15: ನಾವು ಮೊದಲು ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಳಿಕ ಉಪದೇಶ ಮಾಡುವುದು ಅತ್ಯವಶ್ಯಕತೆ ಇದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ರವಿವಾರ ಭಾರತೀಯ ವಿದ್ಯಾಭವನದಲ್ಲಿ ಡಾ.ಸಿ. ಸೋಮಶೇಖರ್- ಎನ್. ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ 5ನೆ ವರ್ಷದ ಸಂಸ್ಕೃತಿ ಸಂಗಮ-2019 ಪ್ರಶಸ್ತಿ ಪದಾನ ಸಮಾರಂಭದಲ್ಲಿ ಜೀವಮಾನ ಸಾಧನೆ ಮಾಡಿರುವ ಹಿರಿಯ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಿ ಅವರು ಮಾತನಾಡಿದರು. ಸಂಸ್ಕೃತಿ ಎಂಬುವುದು ಆಧಾರ ಸ್ಥಂಭ, ಇದರಲ್ಲಿ ಕೊರತೆ ಉಂಟಾದರೆ ಅದು ನಾಶವಾಗುತ್ತದೆ. ಹೀಗಾಗಿ, ಹಿರಿಯರು ಮಕ್ಕಳಲ್ಲಿ ಸಂಸ್ಕೃತಿಯನ್ನು ಬಿತ್ತುವ ಕೆಲಸ ಮಾಡಬೇಕು. ಸಂಸ್ಕೃತಿಯನ್ನು ನಾವು ಮೊದಲು ಅಳವಡಿಸಿಕೊಂಡು ನಂತರ ಉಪದೇಶ ಮಾಡಬೇಕು. ಜಗತ್ತಿನಲ್ಲಿ ನಗು-ಸಮಯ ಒಟ್ಟಾಗಿ ಜೋಡಣೆ ಯಾಗುವುದು ಕಷ್ಟ ಎಂದು ಹೇಳಿದರು.
ಸಚಿವ ವಿ.ಸೋಮಣ್ಣ ಮಾತನಾಡಿ, ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಸಾಕಷ್ಟು ಜನ ನಿರಾಶ್ರಿತರಾಗಿದ್ದಾರೆ. ರಾಜ್ಯ ಸರಕಾರದಿಂದ ಮನೆಯಿಲ್ಲದವರಿಗೆ 5 ಲಕ್ಷ ರೂ.ಕೊಡುವುದಾಗಿ ನಿರ್ಧರಿಸಲಾಗಿದೆ. ಉತ್ತಮ ಮಳೆಯಿಂದಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ನೀರಿನ ಕೊರತೆಯನ್ನು ನೀಗಿಸಲು ಸಾಧ್ಯ ಎಂದು ತಿಳಿಸಿದರು.
ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ, ನೃತ್ಯ, ಇವೆಲ್ಲ ನಮ್ಮ ಸಂಸ್ಕೃತಿಯನ್ನು ಹಾಸುಹೊಕ್ಕಾಗಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಸೋಮಶೇಖರ ದಂಪತಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ವಿಷಯ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ.ಒ.ಎಲ್. ನಾಗಭೂಷಣ ಸ್ವಾಮಿ, ದಾಸಸಾಹಿತ್ಯ ಕ್ಷೇತ್ರದಲ್ಲಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಜಾನಪದ ಕ್ಷೇತ್ರದಲ್ಲಿ ನಾಡೋಜ ಯಲ್ಲವ್ವ ದುರ್ಗಪ್ಪ ದೊಡ್ಡಪ್ಪ, ಸಂಗೀತ ಕ್ಷೇತ್ರದಲ್ಲಿ ವೀರೇಶ ಕಿತ್ತೂರು, ನೃತ್ಯ ವೈಜಯಂತಿ ಕಾಶಿ ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಹಿತಿ ಚಂದ್ರೇಖರ ಕಂಬಾರ ಉಪಸ್ಥಿತರಿದ್ದರು.







