ಈ ವರ್ಷ 2,050 ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕ್: 21 ನಾಗರಿಕರ ಹತ್ಯೆ
ಸಚಿವಾಲಯದ ವರದಿ

ಹೊಸದಿಲ್ಲಿ,ಸೆ.15: ಈ ವರ್ಷ ಪಾಕಿಸ್ತಾನ 2,050ಕ್ಕೂ ಅಧಿಕ ಬಾರಿ ಕದನವಿರಾಮ ಉಲ್ಲಂಘಿಸಿದೆ ಮತ್ತು 21 ಭಾರತೀಯ ನಾಗರಿಕರನ್ನು ಹತ್ಯೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರವಿವಾರ ತಿಳಿಸಿದೆ.
ಗಡಿಯಲ್ಲಿ ಉಗ್ರರ ನುಸುಳುವಿಕೆಯನ್ನು ಬೆಂಬಲಿಸಿ ಮತ್ತು ಭಾರತದ ನಾಗರಿಕರು ಮತ್ತು ಗಡಿಯಲ್ಲಿರುವ ಸೇನಾ ಶಿಬಿರಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ಕದನವಿರಾಮ ಉಲ್ಲಂಘನೆಯಿಂದ ಆತಂಕ ಹೆಚ್ಚಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ. 2003ರ ಕದನವಿರಾಮ ಒಪ್ಪಂದಕ್ಕೆ ಬದ್ಧವಾಗಿರುವಂತೆ ಮತ್ತು ಗಡಿಯಲ್ಲಿ ಶಾಂತಿಯನ್ನು ಕಾಪಾಡುವಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡುತ್ತಲೇ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಪಡೆಗಳು ಗರಿಷ್ಟ ನಿಯಂತ್ರಣ ಹೊಂದಿದೆ ಮತ್ತು ಅಪ್ರಚೋದಿತ ಉಲ್ಲಂಘನೆಗಳು ಮತ್ತು ಉಗ್ರರ ನುಸುಳುವಿಕೆಯ ಪ್ರಯತ್ನಗಳಿಗಷ್ಟೇ ಪ್ರತಿಕ್ರಿಯಿಸುತ್ತದೆ ಎಂದು ರವೀಶ್ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5ರಂದು ಮೋದಿ ಸರಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಜೊತೆಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು.