ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಎನ್ಸಿ ನಾಯಕ ಲೋನೆ

ಶ್ರೀನಗರ,ಸೆ.15: ಸರಕಾರವು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವವರೆಗೂ ತನ್ನ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಸಂಸದ ಹಾಗೂ ಹಿರಿಯ ನಾಯಕ ಅಕ್ಬರ್ ಲೋನೆ ಅವರು ರವಿವಾರ ಹೇಳಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಭಾರತ ಸರಕಾರವು ರಾಜ್ಯದ ಜನತೆಯನ್ನು ವಂಚಿಸಿದೆ. ಕಾಶ್ಮೀರದಲ್ಲಿ ಪರಿಸ್ಥಿತಿಯು ಸುಧಾರಿಸುತ್ತಿದೆ. ವಿಧಿ 370ರ ರದ್ದತಿಯನ್ನು ಅನಿವಾರ್ಯವಾಗಿಸಿದ ಯಾವುದೇ ಅಹಿತಕರ ಘಟನೆ ರಾಜ್ಯದಲ್ಲಿ ನಡೆದಿರಲಿಲ್ಲ. ಈ ಕ್ರಮವು ದೀರ್ಘಾವಧಿಯಲ್ಲಿ ಸರಕಾರಕ್ಕೆ ದುಬಾರಿಯಾಗಲಿದೆ. ವಿಧಿ 370ನ್ನು ರದ್ದುಗೊಳಿಸಿದ್ದೇವೆ ಮತ್ತು ಎಲ್ಲ ಮುಗಿದಿದೆ ಎಂದು ಅವರು ಭಾವಿಸಿದ್ದಾರೆ. ಆದರೆ ಅದು ಮುಗಿದಿಲ್ಲ ಮತ್ತು ಈಗಷ್ಟೇ ಅದು ಆರಂಭಗೊಂಡಿದೆ ಎಂದರು.
‘ ಇಂದು ಪಾಕಿಸ್ತಾನವೂ ನಮ್ಮೊಂದಿಗಿದೆ. ಕಾಶ್ಮೀರ ಕುರಿತು ಅಮೆರಿಕ ಮಧ್ಯಸ್ಥಿಕೆ ನಡೆಸುತ್ತದೆ ಎಂದರೆ ಅದು ಒಳ್ಳೆಯದು. ಆದರೆ ಅವರು ( ಅಧ್ಯಕ್ಷ ಟ್ರಂಪ್) ಒಂದು ದಿನ ಒಂದನ್ನು ಹೇಳುತ್ತಾರೆ ಮತ್ತು ಮರುದಿನ ಬೇರೆಯದನ್ನೇ ಟ್ವೀಟ್ ಮಾಡುತ್ತಾರೆ ಎಂದ ಲೋನೆ,ಭಾರತವು ಕಾಶ್ಮೀರಿಗಳನ್ನು ದೂರಕ್ಕೆ ತಳ್ಳಿದೆ. ಇಂದಿನ ಭಾರತದಲ್ಲಿ ಶೇಖ್ ಮುಹಮ್ಮದ್ ಅಬ್ದುಲ್ಲಾ ಅವರ ಪುತ್ರ ಮತ್ತು ಮೊಮ್ಮಗನಿಗೂ ಸ್ಥಳವಿಲ್ಲ ಎಂದರು.
370ನೇ ವಿಧಿಯ ರದ್ದತಿಯ ವಿರುದ್ಧ ತನ್ನ ಪಕ್ಷವು ಹೋರಾಡಲಿದೆ ಮತ್ತು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನದ ಮರುಸ್ಥಾಪನೆಗಾಗಿ ಆಗ್ರಹವನ್ನು ಮುಂದುವರಿಸಲಿದೆ ಎಂದ ಅವರು,ವಿಧಿ 370ರ ರದ್ದತಿಯು ಪ್ರದೇಶದಲ್ಲಿ ಉಗ್ರವಾದವನ್ನು ಅಂತ್ಯಗೊಳಿಸುತ್ತದೆ ಎಂದು ಬಿಜೆಪಿ ಯೋಚಿಸಿರಬಹುದು, ಆದರೆ ಅದು ಹೆಚ್ಚಲಿದೆ ಮತ್ತು 1990ರ ದಶಕದಲ್ಲಿ ಇದ್ದಿದ್ದಕ್ಕಿಂತ ಕೆಟ್ಟ ಸ್ಥಿತಿಯುಂಟಾಗಲಿದೆ ಎಂದು ತಾನು ಆತಂಕಗೊಂಡಿದ್ದೇನೆ ಎಂದರು.
ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳ ನಿಯೋಜನೆ,ಅಭೂತಪೂರ್ವ ಕರ್ಫ್ಯೂ ಹೇರಿಕೆ ಮತ್ತು ಸಂವಹನ ನಿರ್ಬಂಧಗಳಿಲ್ಲದಿದ್ದರೆ ಕಾಶ್ಮೀರಿಗಳು ಈಗಾಗಲೇ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಲು ರಸ್ತೆಗಳಲ್ಲಿರುತ್ತಿದ್ದರು ಎಂದ ಲೋನೆ, ಕಾಶ್ಮೀರಿಗಳ ಮೌನವು ಅವರ ವಿವೇಚನೆಯನ್ನು ಪ್ರತಿಫಲಿಸುತ್ತಿದೆ. ಅವರು ಈಗ ಸರಕಾರದ ವಿರುದ್ಧ ಧ್ವನಿಯೆತ್ತಿದ್ದರೆ ಅದು ಭಾರೀ ಸಂಖ್ಯೆಯಲ್ಲಿ ಜನರನ್ನು ಕೊಲ್ಲುತ್ತಿತ್ತು ಎಂದರು.