ತಾಯಂದಿರ ಮರಣದ ಬಗ್ಗೆ ವರದಿ ಸಲ್ಲಿಸದ ಸರಕಾರ: ಹೈಕೋರ್ಟ್ ಕಿಡಿ

ಬೆಂಗಳೂರು, ಸೆ.15: ರಾಜ್ಯದಲ್ಲಿ ಹೆಚ್ಚಿರುವ ಪ್ರಸವದ ವೇಳೆ ತಾಯಂದಿರ ಮರಣ ಪ್ರಮಾಣ(ಎಂಎಂಆರ್) ತಗ್ಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡದ ಸರಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಪಿಐಎಲ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಾದಿಸಿದ ವಕೀಲರು, ಹೈಕೋರ್ಟ್ ಹಿಂದೆ ನೀಡಿದ್ದ ಆದೇಶದಂತೆ ವರದಿ ನೀಡಲು ಇನ್ನೂ ಎರಡು ವಾರ ಕಾಲಾವಕಾಶಬೇಕೆಂದು ಕೋರಿದರು. ಅದಕ್ಕೆ ಗರಂ ಆದ ಸಿಜೆ, ಇದು ಅಷ್ಟು ಪ್ರಮುಖ ಮತ್ತು ಗಂಭೀರ ವಿಷಯ, ಆದರೆ, ವರದಿ ಸಲ್ಲಿಸುವಂತೆ ಹೇಳಿ ಒಂದು ತಿಂಗಳಾದರೂ ಏಕೆ ಕ್ರಮ ಕೈಗೊಂಡಿಲ್ಲ. ಸರಕಾರಕ್ಕೆ ಇಂತಹ ವಿಷಯಗಳಲ್ಲಿ ನ್ಯಾಯಾಲಯಗಲ ನಿರ್ದೇಶನದಂತೆ ನಡೆದುಕೊಳ್ಳಲು ಸಮಯವಿಲ್ಲವೇ ಎಂದು ಪ್ರಶ್ನಿಸಿದರು. ಸಮಯ ನೀಡುತ್ತೇವೆ, ಆದರೆ, ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರ ಕೊರತೆ ಹೆಚ್ಚಿದೆ, ಆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಹೇಳಿ ಎಂದು ಕೇಳಿದರು.
ಕಾನೂನು ಸೇವಾ ಪ್ರಾಧಿಕಾರದ ಪರ ವಾದ ಮಂಡಿಸಿದ ವಕೀಲೆ ನಳೀನಾ ಮಾಯಾಗೌಡ ಅವರು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಸೂತಿ ತಜ್ಞರ ಕೊರತೆ ಇದೆ. 16 ತಿಂಗಳ ಅವಧಿಯಲ್ಲಿ 96 ತಾಯಂದಿರು ಮರಣವನ್ನಪ್ಪಿದ್ದಾರೆ. ಹಲವು ಕಡೆ ಆಂಬ್ಯುಲೆನ್ಸ್ ಇಲ್ಲ, ರಕ್ತ ನಿಧಿಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ಮಾಡಿಸಲು ವ್ಯವಸ್ಥೆ ಇಲ್ಲ. ಈ ಬಗ್ಗೆ ಸಿಎಜಿ ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ. ಎನ್ಆರ್ಎಚ್ಎಂ ಯೋಜನೆಯಡಿ 370 ಕೋಟಿ ಹಣವನ್ನು ರಾಜ್ಯ ಸರಕಾರ ಬಳಕೆ ಮಾಡಿಲ್ಲ ಎಂದು ತಿಳಿಸಿದರು. ಕೊನೆಗೆ ನ್ಯಾಯಪೀಠ, ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿ ಅಷ್ಟರಲ್ಲಿ ಸರಕಾರ ವರದಿ ಸಲ್ಲಿಸದಿದ್ದರೆ ನ್ಯಾಯಾಲಯ ಅರ್ಜಿದಾರರು ಮುಂದಿಟ್ಟಿರುವ ಪ್ರಸ್ತಾವಗಳ ಕುರಿತು ಆದೇಶಗಳನ್ನು ನೀಡಲಾಗುವುದು, ಇನ್ನು ಮತ್ತೆ ಕಾಲಾವಕಾಶ ನೀಡುವುದಿಲ್ಲ ಎಂದು ಆದೇಶಿಸಿತು.