ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್ಡಿಪಿಐ ಎಚ್ಚರಿಕೆ
![ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್ಡಿಪಿಐ ಎಚ್ಚರಿಕೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್ಡಿಪಿಐ ಎಚ್ಚರಿಕೆ](https://www.varthabharati.in/sites/default/files/images/articles/2019/09/16/210222-1568635287.jpg)
ಬೆಂಗಳೂರು, ಸೆ. 16: ಮತಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯ ಮತ್ತು ಮಂಗಳಮುಖಿಯರನ್ನು ಅವಮಾನಿಸುವಂತಹ ಹೇಳಿಕೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತನ್ನದು ಎಂದೆಂದಿಗೂ ಹೊಲಸು ನಾಲಗೆ ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಎಸ್ಡಿಪಿಐ ಟೀಕಿಸಿದೆ.
ಬಿಜೆಪಿ ಪಕ್ಷದ ಪ್ರತಿಯೊಬ್ಬ ಶಾಸಕರ ಒಂದೊಂದು ಆವಾಂತರವನ್ನು ಗಮನಿಸಿದರೆ ಇದೊಂದು ಅನಿಷ್ಟ ಪಕ್ಷ ಎಂಬುವುದು ಬಹಳ ಸ್ಪಷ್ಟವಾಗುತ್ತದೆ. ಸ್ವಾಭಿಮಾನದಿಂದ ಬದುಕುತ್ತಿರುವ ತೃತೀಯಲಿಂಗಿ ಸಮುದಾಯದ ಬಗ್ಗೆ ಮಾತನಾಡಲು ಬಿಜೆಪಿ ಪಕ್ಷಕ್ಕೆ ಏನು ನೈತಿಕತೆಯಿದೆ ಎಂದು ಎಸ್ಡಿಪಿಐ ಪ್ರಶ್ನಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು ಅಥವಾ ಯಾವುದೇ ಅಭ್ಯರ್ಥಿ ಯಾವುದೇ ಸಮುದಾಯದ ಮತ ಪಡೆಯಬಹುದು. ಆದರೆ, ಇದರ ಕನಿಷ್ಠ ಜ್ಞಾನವೂ ಇಲ್ಲದ ಈಶ್ವರಪ್ಪ ‘ಮುಸಲ್ಮಾನರ ಮತ ಪಡೆಯುವ ಶಾಸಕರು ಹಿಜಡಾಗಳು’ ಎಂಬ ಹೇಳಿಕೆ ನೀಡುವ ಮೂಲಕ ತನ್ನ ಮಾನಸಿಕ ಅಸ್ವಸ್ಥತೆ ಪ್ರದರ್ಶಿಸಿದ್ದು, ಆ ಮೂಲಕ ತಾನು ಜನಪ್ರತಿನಿಧಿಯಾಗಿರಲು ನಾಲಾಯಕ್ಕು ಎಂಬುದನ್ನು ಧೃಢಪಡಿಸಿರುತ್ತಾರೆಂದು ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತೆತ್ತಿದರೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನ ಮಾಡುವ, ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸುವ ಮತ್ತು ಸುಳ್ಳು ಪ್ರಚಾರ ಮಾಡುವ ಈಶ್ವರಪ್ಪರ ಈ ಚಾಳಿಯ ವಿರುದ್ಧ ಎಸ್ಡಿಪಿಐ ಮಾನನಷ್ಟ ಮೊಕದ್ದಮೆ ದಾಖಲಿಸುವುದರ ಮೂಲಕ ಕಾನೂನು ಹೋರಾಟ ನಡೆಸಲಿದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.