ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ ಕೋರಿ ಬಿಎಸ್ಸೆನ್ನೆಲ್ ಮನವಿ
![ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ ಕೋರಿ ಬಿಎಸ್ಸೆನ್ನೆಲ್ ಮನವಿ ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ ಕೋರಿ ಬಿಎಸ್ಸೆನ್ನೆಲ್ ಮನವಿ](https://www.varthabharati.in/sites/default/files/images/articles/2019/09/16/210313-1568649403.jpg)
ಬೆಂಗಳೂರು, ಸೆ.16: ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಸೆನ್ನೆಲ್) ಸಂಸ್ಥೆಯು ವಿದ್ಯುತ್ ಬಳಕೆಗೆ ಬಾಕಿ ಹಣ ಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿ ಬಿಎಸ್ಸೆನ್ನೆಲ್ ಪ್ರಧಾನ ಪ್ರಬಂಧಕ ಎನ್.ಜನಾರ್ದನ್ ರಾವ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಬಿಎಸ್ಸೆನ್ನೆಲ್ ಸೇವೆಯು ಅವಶ್ಯಕ ಸೇವೆಯಾಗಿದ್ದು, ಕೆಎಸ್ಡಬ್ಲುಎಎನ್ ಸೇರಿದಂತೆ ಬ್ಯಾಂಕಿಂಗ್, ಹಲವು ಸರಕಾರಿ ಕಚೇರಿಗಳು, ಪೊಲೀಸ್ ಇಲಾಖೆ, ರಕ್ಷಣಾ ಇಲಾಖೆ, ಗುಪ್ತಚರ ಇಲಾಖೆಗಳು ಬಿಎಸ್ಸೆನ್ನೆಲ್ ಸೇವೆಯನ್ನು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳವರೆಗೆ ವಿದ್ಯುತ್ ನಿಲುಗಡೆಗೊಳಿಸದಿರುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಜನಾರ್ದನ್ ರಾವ್ ಅವರ ಮನವಿಗೆ ಸ್ಪಂದಿಸಿರುವ ರಾಜ್ಯ ಸರಕಾರದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಬಿಎಸ್ಸೆನ್ನೆಲ್ ಸಂಸ್ಥೆಯ ಎಕ್ಸ್ಚೇಂಜ್/ಎಚ್ಟಿಎಸ್ ಸ್ಥಾವರಗಳಿಗೆ ಮುಂದಿನ ಎರಡು ತಿಂಗಳವರೆಗೂ ವಿದ್ಯುತ್ ನಿಲುಗಡೆಗೊಳಿಸಬಾರದೆಂದು ಬೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.