ಬೆಂಗಳೂರಿಗೆ ಉಗ್ರರ ದಾಳಿ ಸಾಧ್ಯತೆ ಸುದ್ದಿ: ವದಂತಿ ತಳ್ಳಿ ಹಾಕಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
![ಬೆಂಗಳೂರಿಗೆ ಉಗ್ರರ ದಾಳಿ ಸಾಧ್ಯತೆ ಸುದ್ದಿ: ವದಂತಿ ತಳ್ಳಿ ಹಾಕಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೆಂಗಳೂರಿಗೆ ಉಗ್ರರ ದಾಳಿ ಸಾಧ್ಯತೆ ಸುದ್ದಿ: ವದಂತಿ ತಳ್ಳಿ ಹಾಕಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್](https://www.varthabharati.in/sites/default/files/images/articles/2019/09/17/210467-1568729568.jpg)
ಭಾಸ್ಕರ್ ರಾವ್
ಬೆಂಗಳೂರು, ಸೆ.17: ರಾಜಧಾನಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದೆಲ್ಲಾ ಹರಿದಾಡಿದ ಸುದ್ದಿಗಳನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಳ್ಳಿ ಹಾಕಿದ್ದು, ಸಾರ್ವಜನಿಕರು ಯಾವುದೇ ರೀತಿಯ ಭಯಕ್ಕೆ ಒಳಗಾಗಬಾರದು ಎಂದು ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಸಂಬಂಧ ಯಾವುದೆ ಅಲರ್ಟ್ ಮಾಹಿತಿ ತನಿಖಾ ಸಂಸ್ಥೆಗಳಿಂದ ಬಂದಿಲ್ಲ. ಅಲ್ಲದೆ, ಸಾರ್ವಜನಿಕರು ಯಾವುದೇ ರೀತಿಯ ಭಯಕ್ಕೆ ಒಳಗಾಗಬಾರದು. ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಏನಿದು ಸುದ್ದಿ?: ಬೆಂಗಳೂರು ಸೇರಿದಂತೆ ದೇಶದ 12 ಮಹಾನಗರಗಳ ಮೇಲೆ ಉಗ್ರರು ದಾಳಿ ಸಂಚು ರೂಪಿಸಿದ್ದಾರೆ ಎನ್ನುವ ಸುದ್ದಿಗಳು ಹರದಾಡಿದವು. ಕೇಂದ್ರ ಗುಪ್ತಚರ ಇಲಾಖೆ ಮುಂಬೈ, ಚೆನ್ನೈ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಅಲರ್ಟ್ ಆಗಿ ಇರುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತಿತ್ತು. ಆದರೆ, ಇಂತಹ ಸೂಚನೆಗಳು ಬಂದಿಲ್ಲ ಎಂದು ಆಯಕ್ತರು ತಿಳಿಸಿದ್ದಾರೆ.