ಭಾರತ ದ್ರಾವಿಡರ ದೇಶ ಎಂದಿದ್ದ ಪೆರಿಯಾರ್ ರಾಮಸ್ವಾಮಿ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು
![ಭಾರತ ದ್ರಾವಿಡರ ದೇಶ ಎಂದಿದ್ದ ಪೆರಿಯಾರ್ ರಾಮಸ್ವಾಮಿ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಭಾರತ ದ್ರಾವಿಡರ ದೇಶ ಎಂದಿದ್ದ ಪೆರಿಯಾರ್ ರಾಮಸ್ವಾಮಿ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು](https://www.varthabharati.in/sites/default/files/images/articles/2019/09/17/210561-1568742854.jpg)
ಮೈಸೂರು,ಸೆ.17: ಭಾರತ ಆರ್ಯರ ದೇಶವಲ್ಲ, ದ್ರಾವಿಡರ ದೇಶ ಎಂದು ಪರಿಯಾರ್ ರಾಮಸ್ವಾಮಿ ಪ್ರತಿಪಾದಿಸುತಿದ್ದರು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಹೇಳಿದರು.
ಸಮಾನ ಮನಸ್ಕರ ಬಳಗದ ವತಿಯಿಂದ ಪೆರಿಯಾರ್ ರಾಮಸ್ವಾಮಿ ನಾಯಕರ 140 ನೇ ಜಯಂತಿಯ ಅಂಗವಾಗಿ ನುಡಿನಮನವನ್ನು ಮಹಾರಾಜ ಕಾಲೇಜಿನ ಏಕಲವ್ಯ ವೃತ್ತದಲ್ಲಿ ಮಂಗಳವಾರ ಆಚರಿಸಲಾಯಿತು. ಪೆರಿಯಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಮಾನವೀಯತೆಯ ಹರಿಕಾರ, ಶೋಷಿತರ ಬಂಧು, ಮಹಾ ಮಾನವತಾವಾದಿ ರಾಮಸ್ವಾಮಿ ಪೆರಿಯಾರ್ ಅವರ 140ನೇ ಜಯಂತಿಯನ್ನು ಸಮಾನ ಮನಸ್ಕ ವೇದಿಕೆ ವತಿಯಿಂದ ಆಚರಣೆ ಮಾಡುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಪೆರಿಯಾರ್ ರಾಮಸ್ವಾಮಿ ಅವರು ಈ ದೇಶ ಆರ್ಯರ ದೇಶವಲ್ಲ. ದ್ರಾವಿಡರ ದೇಶ. ಮೂಲ ನಿವಾಸಿಗಳ, ರೈತರ, ಕಾರ್ಮಿಕರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ದೇಶ ಎಂದಿದ್ದರು. ತಾವೇ ಪಕ್ಷ ಕಟ್ಟುವ ಮೂಲಕ ಹೋರಾಟದ ಮನೋಭಾವವನ್ನು ತುಂಬಿ ಎಲ್ಲ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಸರ್ವರಿಗೂ ಸಮಬಾಳು, ಸಮಪಾಲು ಸಿಗಬೇಕೆಂದು ಆಶಿಸಿದರು. ದ್ರಾವಿಡ ನಾಯಕರನೇಕರನ್ನು ಸೃಷ್ಟಿಸಿದರು ಎಂದು ಹೇಳಿದರು.
ಪೆರಿಯಾರ್ ಮುಂದೆ ಪ್ರಧಾನಿ ಮೋದಿ, ಅಮಿತ್ ಶಾ ಆಟ ಏನೂ ನಡೆಯಲ್ಲ ಎಂಬುದು ತಮಿಳುನಾಡಿನ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಸಾಬೀತಾಗಿದೆ. ಇನ್ನೂ ಕೂಡ ಮತೀಯ ಭಾವನೆಗಳನ್ನು ಕೆರಳಿಸಿ ಶೋಷಿತ ವರ್ಗದ ಯುವಕರು ದಾರಿತಪ್ಪಿಸುವ ಕೆಲಸವಾಗುತ್ತಿದ್ದು, ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು
ಮೈಸೂರು ಸಮಾನ ಮನಸ್ಕರ ಬಳಗದ ಸಂಚಾಲಕರಾದ ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಕೆವಿ ದೇವೇಂದ್ರ, ಹಿನಕಲ್ ವೆಂಕಟೇಶ, ಸೋಮಣ್ಣ, ಯೋಗೇಶ್, ನಾಗವಾಲತಿಮ್ಮನಾಯಕ, ವಿನೋದ್, ಪ್ರತಾಪ್, ಶೇಖರ, ಪುಟ್ಟಮಾದನಾಯಕ, ಅಜಯ್ ಶಿವಣ್ಣ, ಪುರುಷೋತ್ತಮ, ರಾಜುಮಾರ್ಕೆಟ್, ಚಂದ್ರ, ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.