ಅಯೋಧ್ಯೆ ಪ್ರಕರಣ: ಅಕ್ಟೋಬರ್ 18ರೊಳಗೆ ವಿಚಾರಣೆ ಮುಗಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಸೆ.18: ಅಯೋಧ್ಯೆ ಪ್ರಕರಣದ ವಿಚಾರಣೆ ಅಕ್ಟೋಬರ್ 18ರೊಳಗೆ ಮುಕ್ತಾಯಗೊಳ್ಳಬೇಕು ಎಂದು ತನಗೆ ತಾನೇ ಸುಪ್ರೀಂ ಕೋರ್ಟ್ ಗಡುವು ವಿಧಿಸಿಕೊಂಡಿದೆ. ಅಷ್ಟರೊಳಗಾಗಿ ಅಪೀಲುದಾರರು ಈ ಪ್ರಕರಣವನ್ನು ಸಂಧಾನ ಮಾತುಕತೆಗಳ ಮೂಲಕವೂ ಪರಿಹರಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ದಿನಂಪ್ರತಿ ವಿಚಾರಣೆ ಮುಂದುವರಿಯಲಿದೆ ಎಂದೂ ಅದು ತಿಳಿಸಿದೆ.
ಅಯೋಧ್ಯೆ ಪ್ರಕರಣದ 26ನೇ ದಿನದ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ. ನವೆಂಬರ್ 17ರಂದು ಈಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನಿವೃತ್ತರಾಗುವ ಮುನ್ನ ತೀರ್ಪು ಹೊರ ಬೀಳಬೇಕಿದೆ.
ತಮ್ಮ ವಾದವಿವಾದಗಳನ್ನು ಮುಗಿಸಲು ಅಗತ್ಯ ಸಮಯದ ಕುರಿತಂತೆ ತಿಳಿಸಲು ಅಪೀಲುದಾರರಿಗೆ ನ್ಯಾಯಾಲಯ ಈ ಹಿಂದೆ ಹೇಳಿತ್ತಲ್ಲದೆ ವರದಿಗಳನ್ನು ಪರಿಶೀಲಿಸಿ ಅಕ್ಟೋಬರ್ 18ರೊಳಗೆ ವಿಚಾರಣೆ ಮುಗಿಯಬೇಕು ಎಂದು ಹೇಳಿದೆ.
ಅಯೋಧ್ಯೆ ಸಂಧಾನ ಪ್ರಕ್ರಿಯೆ ವಿಫಲವಾಗಿದೆ ಎಂದು ಕಳೆದ ತಿಂಗಳು ಹೇಳಿದ್ದ ನ್ಯಾಯಾಲಯ ಆಗಸ್ಟ್ 6ರಿಂದ ಪ್ರಕರಣದ ದಿನಂಪ್ರತಿ ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ತ್ರಿಸದಸ್ಯ ಸಮಿತಿ ಸಂಧಾನ ಮೂಲಕ ಸಮಸ್ಯೆ ಪರಿಹಾರಕ್ಕೆ ಸರ್ವ ಪ್ರಯತ್ನ ನಡೆಸಿದ್ದರೂ ಯಶಸ್ವಿಯಾಗಿರಲಿಲ್ಲ.