ಹಿರಿಯ ನಟಿ ಎಸ್.ಕೆ.ಪದ್ಮಾದೇವಿ ನಿಧನ
![ಹಿರಿಯ ನಟಿ ಎಸ್.ಕೆ.ಪದ್ಮಾದೇವಿ ನಿಧನ ಹಿರಿಯ ನಟಿ ಎಸ್.ಕೆ.ಪದ್ಮಾದೇವಿ ನಿಧನ](https://www.varthabharati.in/sites/default/files/images/articles/2019/09/19/210785-1568873810.gif)
ಬೆಂಗಳೂರು, ಸೆ.19: ಹಿರಿಯ ನಟಿ ಎಸ್.ಕೆ.ಪದ್ಮಾದೇವಿ(95) ಗುರುವಾರ ನಿಧನರಾಗಿದ್ದಾರೆ.
ಮೂಲತಃ ಬೆಂಗಳೂರಿನವರಾದ ಪದ್ಮಾದೇವಿ ಅವರು ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದವರು. ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ‘ಭಕ್ತಧ್ರುವ’(1934)ದಲ್ಲಿ ನಟಿಸುವ ಮೂಲಕ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ‘ಸಂಸಾರನೌಕ’ (1936) ಅವರಿಗೆ ಹೆಸರು ತಂದು ಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಅವರು ಹಾಡಿದ್ದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದರು. ‘ವಸಂತಸೇನ’, ‘ಭಕ್ತ ಸುಧಾಮ’, ‘ಜಾತಕ ಫಲ’ ಚಿತ್ರಗಳಲ್ಲಿಯೂ ನಟಿಸಿದ್ದರು. ‘ಭಕ್ತಸುಧಾಮ’ದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಈ ನಡುವೆ ರಂಗಭೂಮಿಯಲ್ಲೇ ತೊಡಗಿಕೊಂಡ ಪದ್ಮಾದೇವಿ ಬಹಳ ಕಾಲ ಚಲನಚಿತ್ರದ ಅಭಿನಯದಿಂದ ದೂರ ಸರಿದಿದ್ದರು. ‘ಮುಕ್ತಿ’, ‘ಅಮರ ಮಧುರ ಪ್ರೇಮ’, ‘ಸಂಕ್ರಾಂತಿ’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕ್ರೌರ್ಯ’ ಚಿತ್ರದ ರೇಣುಕಮ್ಮ ಮುರಗೊಡು ಅವರ ಪಾತ್ರಕ್ಕೆ ಕಂಠದಾನ ಮಾಡಿದ್ದಾರೆ. ಮಗ ನಂದಕಿಶೋರ್ ನಿರ್ದೇಶಿಸಿದ ‘ಕಿರಣ’ ಟೆಲಿ ಫಿಲಂನಲ್ಲಿ ಅಜ್ಜಿ ಪಾತ್ರ ಮಾಡಿದ್ದರು.
ಎಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ಅಭಿನಯಿಸಿದ್ದ ಪದ್ಮಾದೇವಿ ಸ್ವಂತ ನಾಟಕ ಸಂಸ್ಥೆಯನ್ನು ಕಟ್ಟಿದ್ದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಆ ಮಾಧ್ಯಮದಲ್ಲಿಯೂ ಹೆಸರು ಮಾಡಿದ್ದರು.