ಆರ್ ಬಿಐ ನಿರ್ಧಾರಗಳಲ್ಲಿ ಯಾರದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ: ಗವರ್ನರ್ ಶಕ್ತಿಕಾಂತ್ ದಾಸ್

ಮುಂಬೈ,ಸೆ.20: ಭಾರತೀಯ ರಿಸರ್ವ್ ಬ್ಯಾಂಕ್ ಸ್ವಾಯತ್ತ ಸಂಸ್ಥೆಗಿಂತಲೂ ಹೆಚ್ಚಿನದಾಗಿದೆ ಎಂದು ಶುಕ್ರವಾರ ಇಲ್ಲಿ ಹೇಳಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು,ಅದು ಸರಕಾರದೊಂದಿಗೆ ಮುಕ್ತ ಮತ್ತು ನೇರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತದೆ ಹಾಗೂ ಅದು ನಿರ್ಧಾರಗಳನ್ನು ಕೈಗೊಳ್ಳುವ ವಿಷಯದಲ್ಲಿ ಯಾರದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಇಂಡಿಯಾ ಟುಡೇ ಗ್ರುಪ್ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು,ಎಲ್ಲ ದೇಶಗಳಲ್ಲಿ ಸರಕಾರ ಮತ್ತು ಸೆಂಟ್ರಲ್ ಬ್ಯಾಂಕ್ಗಳ ದೃಷ್ಟಿಕೋನಗಳು ವಿಭಿನ್ನವಾಗಿರುವುದರಿಂದ ಅವುಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಪರಸ್ಪರ ಚರ್ಚೆ,ಮಾತುಕತೆಗಳ ಮೂಲಕ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಆರ್ ಬಿಐ ಮತ್ತು ಸರಕಾರದ ನಡುವೆ ಬಹಳಷ್ಟು ಸಂವಾದಗಳು ನಡೆಯುತ್ತಿರುತ್ತವೆ. ಆದರೆ ಯಾವುದೇ ವಿಷಯದಲ್ಲಿ ಅಂತಿಮ ನಿರ್ಧಾರ ಆರ್ಬಿಐದೇ ಆಗಿರುತ್ತದೆ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅದು ಶೇ.100ಕ್ಕೂ ಹೆಚ್ಚು ಸ್ವಾಯತ್ತೆಯನ್ನು ಹೊಂದಿದೆ. ಅದರ ನಿರ್ಧಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಸರಕಾರವು ಸಾರ್ವಭೌಮವಾಗಿದೆ ಮತ್ತು ಆರ್ಬಿಐ ಈ ಸಾರ್ವಭೌಮತೆಯ ಭಾಗವಾಗಿರುವುದರಿಂದ ಸರಕಾರದೊಂದಿಗೆ ಸಂವಾದಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಆರ್ಬಿಐ ಸರಕಾರವನ್ನು ಖುಷಿ ಪಡಿಸುವ ಕೆಲಸ ಮಾಡಬೇಕಿಲ್ಲ ಎಂದು ಹೇಳುವ ಜನರಿಗೆ ‘ಆರ್ಬಿಐ ಆರ್ಥಿಕತೆಯ ಕುರಿತು ಭಾಷಣ ಬಿಗಿಯುತ್ತ ಮತ್ತು ಸರಕಾರವನ್ನು ನಿಂದಿಸುತ್ತಲೇ ಇರಬೇಕು ಎನ್ನುವುದು ನಿಮ್ಮ ನಿರೀಕ್ಷೆಯೇ’ ಎನ್ನುವುದು ತನ್ನ ಪ್ರಶ್ನೆಯಾಗಿದೆ ಎಂದು ದಾಸ್ ಹೇಳಿದರು.