ಬೆದರಿಕೆ ಹಾಕಿದ ಆರೋಪ: ಬಿ.ಎಸ್.ಲಿಂಗದೇವರು ವಿರುದ್ಧ ಸೈಬರ್ ಕ್ರೈಂಗೆ ದೂರು
![ಬೆದರಿಕೆ ಹಾಕಿದ ಆರೋಪ: ಬಿ.ಎಸ್.ಲಿಂಗದೇವರು ವಿರುದ್ಧ ಸೈಬರ್ ಕ್ರೈಂಗೆ ದೂರು ಬೆದರಿಕೆ ಹಾಕಿದ ಆರೋಪ: ಬಿ.ಎಸ್.ಲಿಂಗದೇವರು ವಿರುದ್ಧ ಸೈಬರ್ ಕ್ರೈಂಗೆ ದೂರು](https://www.varthabharati.in/sites/default/files/images/articles/2019/09/21/211207-1569082926.jpg)
ಬೆಂಗಳೂರು, ಸೆ.21: ಲಿಂಗದೇವರು 'ಮೌನ ದೌರ್ಬಲ್ಯ ಅಲ್ಲ, ಮುಂದೈತಿ ಕರಾಳ ರಾತ್ರಿ ಮತ್ತು ದಿನ' ಎಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದಿದ್ದರು. ಹೀಗಾಗಿ, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಬಿ.ಎಸ್.ಲಿಂಗದೇವರು ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ ಎಂದು ಚಲನಚಿತ್ರ ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗದೇವರು ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ನನಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಾತಿಚರಾಮಿ ಚಿತ್ರಕ್ಕೆ ಐದು ರಾಷ್ಟ್ರಪ್ರಶಸ್ತಿಗಳು ಸಿಕ್ಕಿವೆ. ಚಿತ್ರದ ಸಂಕಲನಕ್ಕೂ ಪ್ರಶಸ್ತಿ ಸಿಕ್ಕಿದೆ. ಆಯ್ಕೆ ಸಮಿತಿಯಲ್ಲಿದ್ದ ಕಾರಣ ಚಿತ್ರದ ಪರ ಪ್ರಶಸ್ತಿಗಳಿಗೆ ಆಯ್ಕೆ ಮಾಡಿರಬಹುದು. ಹೀಗಾಗಿ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಿಯಮದ ಪ್ರಕಾರ ಆಯ್ಕೆ ಸಮಿತಿ ಸದಸ್ಯರು ಯಾವುದೇ ಚಿತ್ರಗಳಿಗೆ ಸಂಬಂಧಪಟ್ಟಿರಬಾರದು. ಆದರೆ, ನಾತಿಚರಾಮಿ ಚಿತ್ರದ ಸಂಕಲನಕ್ಕೆ ಲಿಂಗದೇವರು ನಿರ್ದೇಶಕರಾಗಿರುವ ಅಕ್ಕ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಹಾಯ ಮಾಡಿದೆ. ಹೀಗಾಗಿ ಚಿತ್ರದ ನಿರ್ಮಾಣದಲ್ಲಿ ಅವರು ನೇರ ಪಾತ್ರ ವಹಿಸಿರುತ್ತಾರೆ. ಆದರೆ, ಆಯ್ಕೆ ಸಮಿತಿಗೆ ನೀಡಿರುವ ಘೋಷಣಾ ಪತ್ರದಲ್ಲಿ ಈ ಅಂಶ ನಮೂದಿಸಿಲ್ಲ ಎಂದು ಆರೋಪಿಸಿದರು.