ಎಐಎಂಐಎಂ ಜೊತೆ ಸ್ಥಾನ ಹಂಚಿಕೆಗೆ ಮುಕ್ತ: ಪ್ರಕಾಶ್ ಅಂಬೇಡ್ಕರ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ

ಪುಣೆ, ಸೆ. 23: ಕಳೆದ ಎಪ್ರಿಲ್ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದ ವಂಚಿತ್ ಬಹುಜನ್ ಅಘಾದಿ (ವಿಬಿಎ), ಮುಂದಿನ ತಿಂಗಳು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಈ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಯನ್ನು ಸೋಮವಾರ ತಿರಸ್ಕರಿಸಿದೆ.
ಆದರೆ, ವಿಬಿಎ ನಾಯಕ ಪ್ರಕಾಶ್ ಅಂಬೇಡ್ಕರ್, ತನ್ನ ಪಕ್ಷ ಭರಿಪ ಬಹುಜನ ಮಹಾ ಸಂಘ (ಬಿಬಿಎಂ) ಎಐಎಂಐಎಂನೊಂದಿಗೆ ಸ್ಥಾನ ಹಂಚಿಕೆಯ ಮಾತುಕತೆಗೆ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ವಿಬಿಎ ಎಲ್ಲ 288 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಹೆಸರು ಹಾಗೂ ಮೈತ್ರಿ ಪಕ್ಷಗಳ ಹೆಸರನ್ನು ಸೆಪ್ಟಂಬರ್ 26ಕ್ಕೆ ಪ್ರಕಟಿಸಲಿದೆ ಎಂದು ಅಂಬೇಡ್ಕರ್ ಅವರು ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ 144 ಸ್ಥಾನಗಳ ಕೊಡುಗೆಯನ್ನು ಕಾಂಗ್ರೆಸ್ ನೀಡಿದೆ. ಆದರೆ, ನಾವು ಪ್ರತಿಕ್ರಿಯಿಸಿಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
‘‘ಅವರು ವಿಬಿಎಯನ್ನು ಬಿಜೆಪಿಯ ಬಿ ತಂಡ ಎಂದು ಕರೆಯುತ್ತಿದ್ದಾರೆ. ಆದರೆ, ಅದು (ಕಾಂಗ್ರೆಸ್) ಸರಕಾರದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಪ್ರಕರಣದಿಂದ ಬಿಡುಗಡೆ ಪಡೆಯಲು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ’’ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂನೊಂದಿಗಿನ ಉತ್ತಮ ಸಂಬಂಧವನ್ನು ವಿಬಿಎ ಆನಂದಿಸುತ್ತಿದೆ. ಎರಡೂ ಪಕ್ಷಗಳ ನಡುವೆ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುವವರು ಸಫಲರಾಗರು ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.