ಕಾಶ್ಮೀರ ನಿರ್ಬಂಧ: ಸೊರಗಿದ ಕಾರ್ಪೆಟ್ ಉದ್ಯಮ
ಶ್ರೀನಗರ, ಸೆ. 23: 370ನೆ ವಿಧಿ ರದ್ದುಗೊಳಿಸಿದ ಬಳಿಕ ನಿರ್ಬಂಧ ಹಾಗೂ ಸಂವಹನ ನಿರ್ಬಂಧ ಹೇರಿರುವುದು ಕಾಶ್ಮೀರ ಕಣಿವೆಯಲ್ಲಿ ಆತಿಥ್ಯ ಹಾಗೂ ಕಾರ್ಪೆಟ್ ಉತ್ಪಾದನಾ ವಲಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ.
ಹೊಟೇಲ್ನ ಶೇ. 80ರಿಂದ 90 ಉದ್ಯೋಗಿಗಳು ಹಾಗೂ ಕಾರ್ಪೆಟ್ ವ್ಯಾಪಾರದಲ್ಲಿ ತೊಡಗಿದ್ದ 50,000 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಕಲಂ 370 ರದ್ದುಗೊಳಿಸಿದ ಆಗಸ್ಟ್ 5ರ ಬಳಿಕ ಕಾಶ್ಮೀರ ಕಣಿವೆಯಲ್ಲಿರುವ ಎಲ್ಲ ಹೊಟೇಲ್, ಅತಿಥಿ ಗೃಹಗಳು ಹಾಗೂ ಶ್ರೀನಗರದಲ್ಲಿರುವ ದೋಣಿ ಮನೆಗಳಿಗೆ ಯಾರೂ ಭೇಟಿ ನೀಡುತ್ತಿಲ್ಲ.
‘‘ಭಯೋತ್ಪಾದನೆ ಬೆದರಿಕೆ ಇರುವುದರಿಂದ ಪ್ರವಾಸಿಗರು ಹಾಗೂ ಅಮರನಾಥ ಯಾತ್ರಿಗಳು ಕಣಿವೆ ತ್ಯಜಿಸಬೇಕು ಎಂದು ಜಮ್ಮು ಹಾಗೂ ಕಾಶ್ಮೀರ ಸರಕಾರ ಆಗಸ್ಟ್ 2ರಂದು ಭದ್ರತಾ ಸಲಹೆ ನೀಡುವ ವರೆಗೆ ನಮ್ಮ ಹೊಟೇಲ್ನಲ್ಲಿ ಶೇ. 70ರಿಂದ 80ರಷ್ಟು ಉದ್ಯೋಗಿಗಳು ಇದ್ದರು’’ ಎಂದು ಉತ್ತರ ಕಾಶ್ಮೀರದ ಗುಲ್ಮಾರ್ಗ್ನ ಹೊಟೇಲ್ ಮಾಲಕರೊಬ್ಬರು ತಿಳಿಸಿದ್ದಾರೆ.
ಎಲ್ಲ 62 ಹೊಟೇಲ್ಗಳು ಹಾಗೂ ಅಂಗಡಿಗಳು ಮುಚ್ಚಿರುವುದರಿಂದ ಗುಲ್ಮಾರ್ಗ್ ಮರುಭೂಮಿಯಂತಾಗಿದೆ. ಹೊಟೇಲ್ ಮಾಲಕರು ತಮ್ಮ ಹೊಟೇಲ್ನ ಹೆಚ್ಚಿನ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಹೊಟೇಲೊಂದರ ನೌಕರ ಗುಲಾಮ್ ಅಹ್ಮದ್ ಹೇಳಿದ್ದಾರೆ. ‘‘ಕೆಲವೇ ನೌಕರರನ್ನು ಉಳಿಸಿಕೊಳ್ಳಲಾಗಿದೆ. ಅವರು ಮಾತ್ರ ಹೊಟೇಲ್ಗೆ ರಕ್ಷಣೆ ನೀಡುತ್ತಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.