ಕುಮಾರಸ್ವಾಮಿ ಯಾವ ಪ್ರಜ್ಞೆಯಲ್ಲಿ ಮಾತನಾಡಿದರೋ ಗೊತ್ತಿಲ್ಲ: ಸಿದ್ದರಾಮಯ್ಯ
![ಕುಮಾರಸ್ವಾಮಿ ಯಾವ ಪ್ರಜ್ಞೆಯಲ್ಲಿ ಮಾತನಾಡಿದರೋ ಗೊತ್ತಿಲ್ಲ: ಸಿದ್ದರಾಮಯ್ಯ ಕುಮಾರಸ್ವಾಮಿ ಯಾವ ಪ್ರಜ್ಞೆಯಲ್ಲಿ ಮಾತನಾಡಿದರೋ ಗೊತ್ತಿಲ್ಲ: ಸಿದ್ದರಾಮಯ್ಯ](https://www.varthabharati.in/sites/default/files/images/articles/2019/09/24/211643-1569334721.jpg)
ಹುಬ್ಬಳ್ಳಿ, ಸೆ.24: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 'ಸಿದ್ದರಾಮಯ್ಯ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದವು' ಎಂದಿದ್ದಾರೆ, ಅವರು ಯಾವ ಪ್ರಜ್ಞೆಯಲ್ಲಿ ಮಾತನಾಡಿದರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಅವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಮೈಸೂರು ಮತ್ತು ಕೊಡಗಿನಲ್ಲಿ ಬಿಜೆಪಿಗೆ ಓಟು ಹಾಕಿಸುವಂತೆ ಕುಮಾರಸ್ವಾಮಿಯೇ ನಮಗೆ ಹೇಳಿದ್ದರು ಎಂದು ಅವರ ಪಕ್ಷದ ಜಿ.ಟಿ.ದೇವೇಗೌಡ ಇತ್ತೀಚೆಗೆ ಹೇಳಿದ್ದಾರೆ. ಹಾಗಾದರೆ, ಇದು ಯಾರ ನಾಟಕ? ಎಂದು ಪ್ರಶ್ನಿಸಿದರು.
ಒಂದೂವರೆ ವರ್ಷಗಳ ಕಾಲದ ಸಮ್ಮಿಶ್ರ ಸರಕಾರ ಅತ್ಯಂತ ಕೆಟ್ಟದಾಗಿತ್ತು ಎಂದು ಕುಮಾರಸ್ವಾಮಿಯೇ ಒಪ್ಪಿದ್ದಾರೆ. ಅದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ಅನರ್ಹ ಶಾಸಕ ಎಚ್.ವಿಶ್ವನಾಥ್ ಸಿ.ಡಿ.ಬಿಡುಗಡೆಗೆ ಸಂಬಂಧಿಸಿದಂತೆ ಸಾ.ರಾ.ಮಹೇಶ್ರನ್ನು ಕೇಳಿ, ಅವರಿಗೆ ಹೆಚ್ಚಾಗಿ ತಿಳಿದಿದೆ ಎಂದರು.
ನಾನು ಸರಿಯಾಗಿ ಮಾಡಿದ್ದೆ: ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯ ಅವರ ಕಾರು ಹೊರಡುವಾಗ ರೈತರೊಬ್ಬರು, ಸರ್ ನನ್ನ ಸಾಲ ಇನ್ನೂ ಮನ್ನಾ ಆಗಿಲ್ರಿ. ಏನಾದ್ರು ಮಾಡ್ರಿ ಎಂದು ಮನವಿ ಮಾಡಿದರು. ಅದಕ್ಕೆ ನಾನು ಸರಿಯಾಗಿ ಸಾಲ ಮನ್ನಾ ಮಾಡಿದ್ದೆ. ಕುಮಾರಸ್ವಾಮಿ ಮಾಡಿದ್ದು ಸರಿ ಇಲ್ಲಪ್ಪಾ. ನಾನೇನು ಮಾಡಲಿ ಎಂದು ಸಮಾಧಾನಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಸ್ಪಂದಿಸುವುದು ಕೇಂದ್ರ ಸರಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿ ಪ್ರವಾಹ ಸಂಭವಿಸಿ ತಿಂಗಳಾಗಿದೆ. ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಆದರೂ, ಕೇಂದ್ರದಿಂದ ಪರಿಹಾರ ನೀಡುವ ವಿಚಾರದಲ್ಲಿ ನಿರ್ಲಕ್ಷ ಧೋರಣೆ ತೋರಿದೆ. ರಾಜ್ಯ ಸರಕಾರವೂ ನೆರವು ತರುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನರ್ಹ ಶಾಸಕರ ಸಮಸ್ಯೆಗೆ ಸ್ಪಂದಿಸಲು ದಿಲ್ಲಿಗೆ ಹೋಗಿ, ವರಿಷ್ಠರ ಬಳಿ ಹೋಗುತ್ತಾರೆ. ಆದರೆ, ರಾಜ್ಯದ ನೆರೆ ಪರಿಹಾರಕ್ಕೆ ಹೋಗಲಿಲ್ಲ. ಬಿಜೆಪಿಯ 25 ಸಂಸದರು ಹಾಗೂ ರಾಜ್ಯದ ಸಚಿವರು ಏನು ಮಾಡುತ್ತಿದ್ದಾರೆ? ನೆರೆ ಪರಿಹಾರ ತರುವುದ್ಕಕಿಂತ ದೊಡ್ಡ ಕೆಲಸ ಅವರಿಗೆ ಬೇರೆ ಏನಿದೆ? ಎಂದು ಪ್ರಶ್ನಿಸಿದರು. ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಇದುವರೆಗೆ ಸರ್ವ ಪಕ್ಷ ಸಭೆ ಕರೆದಿಲ್ಲ. ಕಡೆ ಪಕ್ಷ ಕೇಂದ್ರದ ಬಳಿ ನೆರವು ಕೇಳಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ಮುಖ್ಯಮಂತ್ರಿಗೆ ಮನಸ್ಸಿಲ್ಲ. ಕೇಂದ್ರದ ನೆರವಿಗಾಗಿ ಪ್ರತಿಭಟನೆ ನಡೆಸಬೇಕಾದ ಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದು ದೂರಿದರು.