ಮುಂದಿನ ಕೆಲವು ದಿನಗಳಲ್ಲಿ ಈರುಳ್ಳಿಯ ಬೆಲೆ ಇಳಿಯಲಿದೆ: ಕೃಷಿಸಚಿವ ತೋಮರ್

ಹೊಸದಿಲ್ಲಿ,ಸೆ.24: ನಾಫೆಡ್ನಂತಹ ಏಜೆನ್ಸಿಗಳು ಪೂರೈಕೆಯನ್ನು ಹೆಚ್ಚಿಸುತ್ತಿದ್ದು,ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿಯ ಬೆಲೆಗಳಲ್ಲಿ ಇಳಕೆಯಾಗಲಿದೆ ಎಂದು ಕೃಷಿಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ದೇಶದ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 70-80 ರೂ.ತಲುಪಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
ಮಹಾರಾಷ್ಟ್ರದಂತಹ ಪ್ರವಾಹ ಪೀಡಿತ ಪ್ರದೇಶಗಳಿಂದ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಕಳೆದೊಂದು ತಿಂಗಳಿನಿಂದ ಬೆಲೆಗಳು ಹೆಚ್ಚುತ್ತಲೇ ಇವೆ. ಕಳೆದ ವಾರದ ಮಳೆ ಪೂರೈಕೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ರೈತರಿಗಾಗಿ ಎರಡು ಮೊಬೈಲ್ ಆ್ಯಪ್ಗಳನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ತೋಮರ್,ಸಹಕಾರಿ ಸಂಸ್ಥೆ ನಾಫೆಡ್ ಕೇಂದ್ರ ಮೀಸಲು ದಾಸ್ತಾನಿನಿಂದ ಈರುಳ್ಳಿಯನ್ನು ಕಡಿಮೆ ಬೆಲೆಗಳಲ್ಲಿ ಬಿಡುಗಡೆಗೊಳಿಸುತ್ತಿದೆ. ಕೇಂದ್ರದ ಬಳಿ ಸಾಕಷ್ಟು ಈರುಳ್ಳಿ ಸಂಗ್ರಹವಿದೆ. ಈರುಳ್ಳಿ ಸ್ಥಿತಿಯ ಬಗ್ಗೆ ಸರಕಾರಕ್ಕೆ ಅರಿವಿದೆ ಮತ್ತು ಅದು ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯಲ್ಲಿ ಸಮತೋಲನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೆಲವು ಸಂದರ್ಭಗಳಲ್ಲಿ ಗ್ರಾಹಕರು ಕೃಷಿಉತ್ಪನ್ನಗಳಿಗೆ ಹೆಚ್ಚು ಬೆಲೆ ತೆರಬೇಕಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಕಡಿಮೆ ಬೆಲೆಗಳನ್ನ್ನು ಪಡೆಯುತ್ತಾರೆ. ಇದನ್ನು ಸಮತೋಲನಗೊಳಿಸುವುದು ಸರಕಾರದ ಕೆಲಸವಾಗಿದ್ದು, ಅದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.