ಟಿಡಿಆರ್ ಪ್ರಕರಣ: ತನಿಖೆಯನ್ನು ಎಸ್ಐಟಿ ಬದಲಿಗೆ ಎಸಿಬಿಯೇ ಮುಂದುವರಿಸಲಿ:-ಹೈಕೋರ್ಟ್
![ಟಿಡಿಆರ್ ಪ್ರಕರಣ: ತನಿಖೆಯನ್ನು ಎಸ್ಐಟಿ ಬದಲಿಗೆ ಎಸಿಬಿಯೇ ಮುಂದುವರಿಸಲಿ:-ಹೈಕೋರ್ಟ್ ಟಿಡಿಆರ್ ಪ್ರಕರಣ: ತನಿಖೆಯನ್ನು ಎಸ್ಐಟಿ ಬದಲಿಗೆ ಎಸಿಬಿಯೇ ಮುಂದುವರಿಸಲಿ:-ಹೈಕೋರ್ಟ್](https://www.varthabharati.in/sites/default/files/images/articles/2019/09/24/211713-1569345697.jpeg)
ಬೆಂಗಳೂರು, ಸೆ.24: ಬಹುಕೋಟಿ ವಂಚನೆಯ ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ಪ್ರಕರಣದ ತನಿಖೆಯನ್ನು ಎಸ್ಐಟಿ ಬದಲಿಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವೇ ಮುಂದುವರಿಸಲಿ ಎಂದು ಹೈಕೋರ್ಟ್ ಆದೇಶಿಸಿದೆ.
ಟಿಡಿಆರ್ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸಲಿ ಎಂದು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಟಿಡಿಆರ್ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ಈ ಪ್ರಕರಣದ ತನಿಖೆಯನ್ನು ಎಸಿಬಿ ಅವರೇ ನಡೆಸಲಿ. ಆದರೆ, ತನಿಖಾಧಿಕಾರಿ ಯಾರಾಗಬೇಕೆಂಬುದನ್ನು ಎಸಿಬಿ ಐಜಿಪಿ ಅವರೆ ನಿರ್ಧರಿಸಲಿ ಎಂದು ನ್ಯಾಯಪೀಠವು ತಿಳಿಸಿದೆ.
ಟಿಡಿಆರ್ ಪ್ರಕರಣದ ತನಿಖೆಯನ್ನು ಎಸ್ಪಿ ಅಬ್ದುಲ್ ಅಹದ್ ಅವರೇ ಮಾಡಿ, ಆ ವರದಿಯನ್ನು ತನಗೆ ಮಾತ್ರ ನೀಡಬೇಕೆಂದು ಏಕಸದಸ್ಯ ನ್ಯಾಯಪೀಠ ಸರಕಾರಕ್ಕೆ ಆದೇಶಿಸಿದೆ. ಆದರೆ, ಈ ರೀತಿ ನಿರ್ದೇಶನ ನೀಡಲು ಏಕ ಸದಸ್ಯ ನ್ಯಾಯಪೀಠಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ. ಹೀಗಾಗಿ, ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಗೊಳಿಸಬೇಕೆಂದು ರಾಜ್ಯ ಸರಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮನವಿ ಮಾಡಿತ್ತು.