ಸುಳ್ಳು ದೂರು ದಾಖಲಿಸಿ ಯುವಕರ ಬಂಧನ: ಆರೋಪ
ದೂರು ಕೈಬಿಡಲು ಒತ್ತಾಯಿಸಿ ಮಹಿಳೆಯರಿಂದ ಎಸ್ಪಿಗೆ ಮನವಿ
ಚಿಕ್ಕಮಗಳೂರು, ಸೆ.25: ನಗರದ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ಯತೀಶ್ ಎಂಬವರು ಜಯನಗರ ಬಡಾವಣೆಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರ ಮನೆಯ ಕಿಟಕಿ ಬಳಿ ನಿಂತು ಮೋಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದನ್ನು ಕೆಲ ಯುವಕರು ಪ್ರಶ್ನಿಸಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ. ಎಸ್ಪಿ ಈ ದುರುದ್ದೇಶದ ದೂರಿನ ವಿರುದ್ಧ ಅಗತ್ಯ ಕ್ರಮಕೈಗೊಂಡು ಅಮಾಯಕ ಯುವಕರಿಗೆ ನೆರವು ನೀಡಬೇಕೆಂದು ಜಯನಗರ ಬಡಾವಣೆಯ ಮಹಿಳೆಯರು ಬುಧವಾರ ಪೋಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರಿಗೆ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಜಯನಗರ ಬಡಾವಣೆಯ ಕಾಮಧೇನು ರಸ್ತೆಯಲ್ಲಿ ವಾಸವಿದ್ದ ದಂಪತಿಯ ಮನೆ ಕಿಟಕಿ ಮೂಲಕ ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾರಣಕ್ಕೆ ಸಂಚಾರಿ ಠಾಣೆಯ ಸಹಾಯಕ ಸಬ್ ಇನ್ ಸ್ಪೆಕ್ಟರ್ ಯತೀಶ್ರನ್ನು ಪ್ರಶ್ನಿಸಲು ಹೋದ ಅದೇ ಬಡಾವಣೆಯ ವಿನೋದ, ವಸಂತ, ಸುಧೀರ್, ಅನೀಲ್ ಎಂಬವರನ್ನು ಪೋಲೀಸರು ಥಳಿಸಿದ್ದಲ್ಲದೇ ಸುಳ್ಳು ಆರೋಪಗಳನ್ನು ಹೊರಿಸಿ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಕೂಡಲೇ ಅವರ ಮೇಲಿನ ಆರೋಪಗಳನ್ನು ಹಿಂಪಡೆದು ಅವರನ್ನು ಬಿಡುಗಡೆಗೊಳಿಸಬೇಕೆಂದು ಬಡಾವಣೆಯ ಮಹಿಳೆಯರು ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯಲ್ಲಿ ಕೋರಿದ್ದಾರೆ.
ಪೊಲೀಸ್ ಸಿಬ್ಬಂದಿಯ ಈ ವರ್ತನೆಯನ್ನು ಯುವಕರು ಪ್ರಶ್ನಿಸಿದ ಸಂದರ್ಭದಲ್ಲಿ ಯತೀಶ್ ಅವರ ಪತ್ನಿಯು ಸ್ಥಳದಲ್ಲಿದ್ದರು. ಅವರು ಈ ವಿಷಯ ಯಾರಿಗೂ ತಿಳಿಸಬೇಡಿ. ಇನ್ನು ಮುಂದೆ ಇಂತಹ ತಪ್ಪುಗಳು ನಡೆಯದಂತೆ ನೋಡಿಕೊಳ್ಳುತ್ತೇನೆ. ಪೋಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿಂದ ವರ್ಗಾವಣೆ ಮಾಡಿಸಿಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದರು ಎಂದು ಮನವಿಯಲ್ಲಿ ಹೇಳಿದ್ದಾರೆ.
ಈ ಪ್ರಕರಣದ ಮಾಹಿತಿ ಅರಿತು ಸ್ಥಳಕ್ಕೆ ಬಂದ ಪೋಲೀಸರು ಸಹಾಯಕ ಸಬ್ಇನ್ಸ್ ಪೆಕ್ಟರ್ ರನ್ನು 4 ಮಂದಿ ಯುವಕರು ಸೇರಿ ಥಳಿಸಿದ್ದಾರೆ ಎಂದು ಆರೋಪಿಸಿ ಮೊಕದ್ದಮೆ ದಾಖಲಿಸಿ ಪೋಲೀಸ್ ಠಾಣೆಯಲ್ಲಿ ಮನಸ್ಸೋಇಚ್ಛೆ ಥಳಿಸಿ ಬಂಧಿಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಎಎಸೈ ಅವರದ್ದೂ ತಪ್ಪಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮದ ಭರವೆ:
ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೋಲೀಸ್ ವರಿಷ್ಠಾಧಿಕಾರಿ ಹರೀಶ್ಪಾಂಡೆ, ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಶನಿವಾರ ರಾತ್ರಿ ಜಯನಗರ ಬಡಾವಣೆಯಲ್ಲಿ ವಾಸವಿರುವ ಸಂಚಾರಿ ಎ.ಎಸ್.ಐ ಯತೀಶ್ ಎಂಬುವರು ಪಕ್ಕದ ಮನೆಯ ದಂಪತಿ ಖಾಸಗಿಯಾಗಿದ್ದಾಗ ಚಿತ್ರೀಕರಣ ಮಾಡುತ್ತಿದ್ದರು ಎಂದು ಆರೋಪಿಸಿ ಸ್ಥಳೀಯ ಯುವಕರು ಥಳಿಸಿದ್ದಾರೆ ಎಂಬ ದೂರಿನ್ವಯ ಬಂಧಿಸಲಾಗಿದೆ ಎಂದರು.
ಅಧಿಕಾರಿ ಚಿತ್ರೀಕರಣ ಮಾಡಿರುವ ಬಗ್ಗೆ ನಮಗೆ ದಾಖಲೆ ಲಭ್ಯವಾಗಿದ್ದು, ಅವರ ವಿರುದ್ದವೂ ಮೊಕದ್ದಮೆ ದಾಖಲಿಸಲಾಗಿದೆ ಎಂದ ಅವರು, ಹಲ್ಲೆಗೊಳಗಾದ ಎ.ಎಸ್.ಐ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರ ಬಂಧನ ಸಾಧ್ಯವಾಗಿಲ್ಲ. ಆರೋಪ ಪ್ರತ್ಯಾರೋಪಗಳ ಸಂಬಂಧ 2 ಕಡೆಯ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಈಗಾಗಲೇ ತನಿಖೆ ಆರಂಭಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.