ಟೀಕಿಸುವವರಿಗೆ ಇಲ್ಲಿ ಜಾಗವಿಲ್ಲ: ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿಯಿಂದ ಇಬ್ಬರು ಸದಸ್ಯರು ಹೊರಕ್ಕೆ

ಹೊಸದಿಲ್ಲಿ, ಸೆ.26: ಕೇಂದ್ರದ ಬಿಜೆಪಿ ಸರಕಾರ ಬುಧವಾರ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯಿಂದ ರತಿನ್ ರಾಯ್ ಹಾಗೂ ಶಮಿಕಾ ರವಿ ಅವರನ್ನು ಕೈಬಿಟ್ಟಿದೆ. ಇಬ್ಬರೂ ಮೋದಿ ಸರಕಾರದ ನೀತಿಗಳ ಕಟು ಟೀಕಾಕಾರರಾಗಿದ್ದಾರೆಂಬುದು ಇಲ್ಲಿ ಉಲ್ಲೇಖನೀಯ.
ರಾಯ್ ಅವರು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ ಇದರ ನಿರ್ದೇಶಕರಾಗಿದ್ದಾರೆ. ದೇಶದ ವಿತ್ತೀಯ ಕೊರತೆ ಕುರಿತಂತೆ ಕೇಸರಿ ಪಡೆ ನೀಡುತ್ತಿದ್ದ ಬೇಕಾಬಿಟ್ಟಿ ಹೇಳಿಕೆಗಳನ್ನು ರಾಯ್ ಈ ಹಿಂದೆ ಟೀಕಿಸಿದ್ದರಲ್ಲದೆ, ವಿದೇಶಿ ಮಾರುಕಟ್ಟೆಗಳಲ್ಲಿ ಸಾವರಿನ್ ಬಾಂಡ್ ಜಾರಿಗೆ ತರುವ ಸರಕಾರದ ಬಜೆಟ್ ಘೋಷಣೆಯ ಕುರಿತಂತೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಶಮಿಕಾ ರವಿ ಅವರು ಬ್ರೂಕಿಂಗ್ಸ್ ಇಂಡಿಯಾ ಸಂಸ್ಥೆಯಲ್ಲಿ ಸಂಶೋಧನಾ ನಿರ್ದೇಶಕರಾಗಿದ್ದಾರೆ. ದೇಶ ಪ್ರಸಕ್ತ ಎದುರಿಸುತ್ತಿರುವ ಆರ್ಥಿಕ ಹಿಂಜರಿತಕ್ಕೆ 1993ರಿಂದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ರದ್ದತಿಯ ಸುಪ್ರೀಂ ಕೋರ್ಟ್ ಆದೇಶ ಹಾಗೂ ಮಾಜಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಹಿಂದಿನ ದಿನಾಂಕದಿಂದ ಅನ್ವಯವಾಗುವ ತೆರಿಗೆ ಕುರಿತಂತೆ ಕೈಗೊಂಡ ನಿರ್ಣಯ ಕಾರಣ ಎಂದು ಸರಣಿ ಟ್ವೀಟ್ಗಳಲ್ಲಿ ಶಮಿಕಾ ಇತ್ತೇಚೆಗೆ ಹೇಳಿಕೊಂಡಿದ್ದರು.
ಇಬ್ಬರೂ ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.