ರಾಬರ್ಟ್ ವಾದ್ರಾ ಅವರ ಕಸ್ಟಡಿ ವಿಚಾರಣೆ ಅಗತ್ಯವಿದೆ: ಹೈಕೋರ್ಟ್ಗೆ ಈ.ಡಿ.

ಹೊಸದಿಲ್ಲಿ, ಸೆ.26: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ನೇರ ಸಂಪರ್ಕ ಹೊಂದಿರುವ ಕಾರಣ ಅವರನ್ನು ತನ್ನ ವಶಕ್ಕೆ ವಿಚಾರಣೆಗಾಗಿ ಒಪ್ಪಿಸಬೇಕೆಂದು ದಿಲ್ಲಿ ಹೈಕೋರ್ಟ್ಗೆ ಜಾರಿ ನಿರ್ದೇಶನಾಲಯ ಗುರುವಾರ ಕೋರಿಕೆ ಸಲ್ಲಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ವಾದ್ರಾ ಪ್ರಕರಣದಲ್ಲಿ ತನಿಖೆಯ ವೇಳೆ ನಮಗೆ ಸಹಕಾರ ನೀಡುತ್ತಿಲ್ಲ ಎಂದು ಜಸ್ಟಿಸ್ ಚಂದ್ರಶೇಖರ್ಗೆ ಈ.ಡಿ. ತಿಳಿಸಿದೆ.
ಸುಮಾರು 1.9 ಮಿಲಿಯನ್ ಪೌಂಡ್(17 ಕೋ.ರೂ.ಗೆ ಅಧಿಕ)ವೌಲ್ಯದ ಲಂಡನ್ ಮೂಲದ ಆಸ್ತಿ ಖರೀದಿಯಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆಂಬ ಆರೋಪ ವಾದ್ರಾ ಮೇಲಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣದ ತನಿಖೆ ನಡೆಯುತ್ತಿದೆ.
‘‘ಹಣದ ಸರಪಳಿ ವಾದ್ರಾರೊಂದಿಗೆ ನೇರ ಸಂಪರ್ಕ ಇರುವ ಕಾರಣ ನಮಗೆ ಅವರ ಕಸ್ಟಡಿಯ ವಿಚಾರಣೆ ಅಗತ್ಯವಿದೆ’’ ಎಂದು ಈ.ಡಿ.ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ.ಡಿ. ವಾದವನ್ನು ಅಲ್ಲಗಳೆದ ವಾದ್ರಾ ಪರ ವಕೀಲರು, ಈ.ಡಿ. ಸಮನ್ಸ್ ನೀಡಿದ ಎಲ್ಲ ಸಂದರ್ಭದಲ್ಲೂ ಈ.ಡಿ.ಮುಂದೆ ಹಾಜರಾಗಿರುವ ವಾದ್ರಾ ತನಿಖೆಗೆ ಸಂಪೂರ್ಣ ಸಹಕರಿಸಿದ್ದಾರೆ. ಈ.ಡಿ. ಮುಂದಿಟ್ಟಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅವರ ವಿರುದ್ಧ ಅರೋಪವನ್ನು ಒಪ್ಪಿಕೊಳ್ಳದೇ ಇರುವುದು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಅರ್ಥವಲ್ಲ’’ ಎಂದರು.
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ನ.5ರಂದು ಅಂತಿಮ ಆದೇಶವನ್ನು ಕಾಯ್ದಿರಿಸಿದೆ.