ಅನಾಥರ ಶವಸಂಸ್ಕಾರಕ್ಕೆ 6,000 ರೂ. ನೀಡಿ ಹೃದಯವೈಶಾಲ್ಯ ಮೆರೆದ ಚಾಲಕ: ಆದರೆ…
ಒಂದೇ ದಿನ ಹೀರೋ ಆದವನು ಮರುದಿನ ಕಂಡದ್ದು ಹೀಗೆ…

ಹೈದರಾಬಾದ್,ಸೆ.26: ಹೈದರಾಬಾದ್ನ ಕ್ಯಾಬ್ ಚಾಲಕ ವಿಜಯ್ ರವಿವಾರ ಅನಾಥ ವ್ಯಕ್ತಿಗಳ ಶವಸಂಸ್ಕಾರಕ್ಕಾಗಿ ಲಾಭರಹಿತ ಎನ್ಜಿಓ ‘ಸರ್ವ ನೀಡೀ ’ಗೆ 6,000 ರೂ.ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿದ್ದರು. ಎರಡು ದಿನಗಳ ಬಳಿಕ ಆ ಹಣ ಅವರದೇ ಅಂತ್ಯಸಂಸ್ಕಾರಕ್ಕೆ ಬಳಕೆಯಾಗಿದೆ.
ವಿಜಯ್ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದು,ಮಂಗಳವಾರ ಅವರ ಶವ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಅವರು ವಿವರವಾದ ಆತ್ಮಹತ್ಯಾ ಪತ್ರವನ್ನು ಬರೆದಿಟ್ಟಿದ್ದು,ತಾನು ಅನಾಥ ಮತ್ತು ಏಕಾಂಗಿಯಾಗಿದ್ದೇನೆ. ತನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ಎಂದು ಅದರಲ್ಲಿ ಹೇಳಿದ್ದಾರೆ.
ಕ್ಯಾಬ್ ಚಾಲಕನಾಗಿ ಸಾಧಾರಣ ಆದಾಯ ಗಳಿಸುತ್ತಿದ್ದ ವಿಜಯ್ ಎನ್ಜಿಒದ ಸಂಚಾಲಕ ಗೌತಮ್ ಕುಮಾರ್ ಅವರಿಗೆ 6,000ರೂ. ಹಸ್ತಾಂತರಿಸುತ್ತಿದ್ದ ವೀಡಿಯೊ ಮತ್ತು ಪೋಸ್ಟ್ಗಳನ್ನು ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ವಿಜಯ ಅವರಿಂದ ಸ್ಫೂರ್ತಿ ಪಡೆಯುವಂತೆ ಕುಮಾರ್ ವೀಡಿಯೊದಲ್ಲಿ ಸಾರ್ವಜನಿಕರನ್ನು ಕೋರಿಕೊಂಡಿದ್ದರು.
ಬುಧವಾರ ಸಂಸ್ಥೆಯ ಸ್ವಯಂಸೇವಕರು ವಿಜಯ್ ಅವರ ದೇಣಿಗೆ ಹಣದಲ್ಲಿಯೇ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.