ಸಿಬಿಐ ಮಾಜಿ ನಿರ್ದೇಶಕ ಅಸ್ತಾನಾ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯಿಂದ ನಿವೃತ್ತಿಗೆ ಅರ್ಜಿ
ಭ್ರಷ್ಟಾಚಾರ ಪ್ರಕರಣ

ರಾಕೇಶ ಅಸ್ತಾನಾ
ಹೊಸದಿಲ್ಲಿ,ಸೆ.26: ಮಾಜಿ ಸಿಬಿಐ ನಿರ್ದೇಶಕ ರಾಕೇಶ ಅಸ್ತಾನಾ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಸಂಸ್ಥೆಯ ಅಧಿಕಾರಿ ಸತೀಶ ಡಾಗರ್ ಅವರು ಸೇವೆಯಿಂದ ಸ್ವಯಂ ನಿವೃತ್ತಿಯನ್ನು ಕೋರಿ ಆ.19ರಂದು ಅರ್ಜಿ ಸಲ್ಲಿಸಿದ್ದಾರೆ.
ಸಿಬಿಐ ಎಸ್ಪಿ ಡಾಗರ್ ಅವರು ವೈಯಕ್ತಿಕ ಕಾರಣಗಳಿಂದ ಸ್ವಯಂ ನಿವೃತ್ತಿಯನ್ನು ಬಯಸಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದರು.
ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಾವಳಿಗಳಂತೆ ಸ್ವಯಂ ನಿವೃತ್ತಿಯನ್ನು ಕೋರುವ ಅಧಿಕಾರಿ ಮೂರು ತಿಂಗಳ ಅವಧಿಯ ನೋಟಿಸ್ನ್ನು ನೀಡುವುದು ಅಗತ್ಯವಾಗಿದೆ.
ಮೇ 31ರಂದು ದಿಲ್ಲಿ ಉಚ್ಚ ನ್ಯಾಯಾಲಯವು ಅಸ್ತಾನಾ ಪ್ರಕರಣದಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ನಾಲ್ಕು ತಿಂಗಳುಗಳ ಕಾಲಾವಕಾಶವನ್ನು ನೀಡಿತ್ತು. ಹೀಗಾಗಿ ಈ ಕಾಲಘಟ್ಟದಲ್ಲಿ ಡಾಗರ್ ಅವರ ಅರ್ಜಿಯು ಸಿಬಿಐನಲ್ಲಿ ಹಲವರ ಹುಬ್ಬುಗಳನ್ನು ಮೇಲಕ್ಕೇರಿಸಿದೆ.
ಮಾಜಿ ಸಿಬಿಐ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರು ಕಳೆದ ವರ್ಷದ ಅಕ್ಟೋಬರ್ನಲ್ಲಿ ಡಾಗರ್ ಅವರನ್ನು ಅಸ್ತಾನಾ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ್ದರು. ಈ ವರ್ಷದ ಜುಲೈನಲ್ಲಿ ರಾವ್ ಅವರನ್ನು ಸಿಬಿಐನಿಂದ ಎತ್ತಂಗಡಿ ಮಾಡಿ ಅಗ್ನಿಶಾಮಕ,ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಸೇವೆಗಳ ಮಹಾ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿತ್ತು.
ಡಾಗರ್ ಅವರು ಈ ಮೊದಲು ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಸಿಂಗ್ ಈಗ ರೋಹ್ಟಕ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಅಸ್ತಾನಾ,ಡಿವೈಎಸ್ಪಿ ದೇವೇಂದ್ರ ಕುಮಾರ ಮತ್ತು ಮಧ್ಯವರ್ತಿ ಮನೋಜ ಪ್ರಸಾದ್ ಅವರು ಮೊಯಿನ್ ಕುರೇಷಿ ಭ್ರಷ್ಟಾಚಾರ ಪ್ರಕರಣದಲ್ಲಿ ಹೈದರಾಬಾದ್ನ ಉದ್ಯಮಿ ಸತೀಶ ಸನಾಗೆ ಕ್ಲೀನ್ ಚಿಟ್ ನೀಡಲು ಎರಡು ಕೋಟಿ ರೂ.ಗಳ ಲಂಚ ಸ್ವೀಕರಿಸಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಕುರೇಷಿ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಸ್ತಾನಾ ಮಾಜಿ ಸಿಬಿಐ ನಿರ್ದೇಶಕ ಅಲೋಕ ವರ್ಮಾ ಅವರ ವಿರುದ್ಧ ಪ್ರತ್ಯಾರೋಪ ಮಾಡಿದ್ದರು. ಕಳೆದ ವರ್ಷದ ಅಕ್ಟೋಬರ್ನಲ್ಲಿ ಕೇಂದ್ರವು ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು.