ಅಯೋಧ್ಯೆ ಪ್ರಕರಣದ ವಿಚಾರಣೆ: ಅ.18ರ ಗಡುವು ನೆನಪಿಸಿದ ಸಿಜೆಐ

ಹೊಸದಿಲ್ಲಿ, ಸೆ.26: ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 18ರೊಳಗೆ ಪೂರ್ಣಗೊಳಿಸಲೇಬೇಕು ಎಂದು ಮತ್ತೆ ಒತ್ತಿಹೇಳಿರುವ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ, ಉಳಿದಿರುವ ದಿನದಲ್ಲಿ ತಮ್ಮ ವಾದ- ಪ್ರತಿವಾದ ಕಾರ್ಯ ಮುಗಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ದೀಪಾವಳಿಗೆ ಒಂದು ವಾರ ರಜೆಯಿರುವ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಪ್ರತೀ ಶನಿವಾರ ಹೆಚ್ಚುವರಿ ಅವಧಿಯಲ್ಲಿ ನ್ಯಾಯಾಲಯದ ಕಲಾಪ ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ನ ನ್ಯಾಯಪೀಠ ತಿಳಿಸಿದೆ. ನಾಲ್ಕು ವಾರದಲ್ಲಿ ತೀರ್ಪು ಹೊರಬಿದ್ದರೆ ನಾವು ಪವಾಡವನ್ನೇ ಸಾಧಿಸಿದಂತಾಗುತ್ತದೆ ಎಂದು ಗೊಗೊಯಿ ಹೇಳಿದ್ದಾರೆ.
ಗೊಗೊಯಿ ಸೇವಾವಧಿ ನವೆಂಬರ್ 17ಕ್ಕೆ ಅಂತ್ಯವಾಗುತ್ತದೆ. ಅಕ್ಟೋಬರ್ 18ಕ್ಕೆ ಗಡುವು ನಿಗದಿಗೊಳಿಸಿದ ಜೊತೆಗೇ, ಸಂಧಾನ ಮಾತುಕತೆಯ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಮಾರ್ಗವೂ ಮುಕ್ತವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಅಯೋಧ್ಯೆ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಹುಡುಕಲು ಸುಪ್ರೀಂಕೋರ್ಟ್ನ ಆದೇಶದಂತೆ ರಚಿಸಿದ್ದ ಸಂಧಾನ ಸಮಿತಿ ವಿಫಲವಾದ ಬಳಿಕ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಪ್ರತೀ ದಿನ ನಡೆಸಲು ನಿರ್ಧರಿಸಿತ್ತು. ಅದರಂತೆ ಆಗಸ್ಟ್ 6ರಿಂದ ಪ್ರತೀದಿನ ವಿಚಾರಣೆ ನಡೆಯುತ್ತಿದ್ದು ಅಕ್ಟೋಬರ್ 18 ವಾದ-ಪ್ರತಿವಾದ ಮಂಡನೆಗೆ ಅಂತಿಮ ದಿನ ಎಂದು ಸಿಜೆಐ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.