ಔಷಧಿ ಸೇವನೆಯಿಂದ ಮಹಿಳೆಯ ಸಾವು: ವೈದ್ಯನಿಗೆ ಐದು ಲ.ರೂ.ದಂಡ

ಗುವಾಹಟಿ,ಸೆ.26: ಮಹಿಳೆಯೋರ್ವಳ ಸಾವಿಗೆ ನಗರ ಆರೋಗ್ಯ ಕೇಂದ್ರದ ವೈದ್ಯರೋರ್ವರ ವೈದ್ಯಕೀಯ ನಿರ್ಲಕ್ಷವು ಕಾರಣವಾಗಿತ್ತು ಎಂದು ಎತ್ತಿ ಹಿಡಿದಿರುವ ಅಸ್ಸಾಂ ಮಾನವ ಹಕ್ಕುಗಳ ಆಯೋಗ (ಎಎಚ್ಆರ್ಸಿ)ವು ,ಮೃತ ರೋಗಿಯ ಪತಿಗೆ ಎರಡು ತಿಂಗಳುಗಳೊಳಗೆ ಐದು ಲ.ರೂ.ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ.
ಪಿಂಕಿ ದಾಸ್ ಎನ್ನುವವರು 2017ರಲ್ಲಿ ಬೆನ್ನುನೋವು,ಸೌಮ್ಯ ಜ್ವರ,ಕೆಳಹೊಟ್ಟೆಯಲ್ಲಿ ನೋವಿನ ಲಕ್ಷಣಗಳೊಂದಿಗೆ ಅಂಬರಿ ನಗರ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಆಕೆಯನ್ನು ತಪಾಸಣೆಗೊಳಪಡಿಸಿದ್ದ ವೈದ್ಯ ಘನಶ್ಯಾಮ ಥಾಕುರಿಯಾ ಅವರು ಲಕ್ಷಣಗಳು ಮೂತ್ರನಾಳ ಸೋಂಕನ್ನು ಸೂಚಿಸುತ್ತವೆ ಎಂದು ನಿರ್ಧರಿಸಿದ್ದರು. ದಾಸ್ಗೆ ಚುಚ್ಚುಮದ್ದುಗಳನ್ನು ಮತ್ತು ಡ್ರಿಪ್ಗಳನ್ನು ನೀಡಲಾಗಿತ್ತು. ಆದರೆ ನಂತರ ಆಕೆಯ ಸ್ಥಿತಿ ತೀರ ಹದಗೆಟ್ಟಿದ್ದು ಇಲ್ಲಿಯ ಆಸ್ಪತ್ರೆಗೆ ತರಲಾಗಿತ್ತು. ಆದರೆ ದಾರಿಮಧ್ಯೆಯೇ ಆಕೆ ಕೊನೆಯುಸಿರೆಳೆದಿದ್ದರು.
2017,ಅಕ್ಟೋಬರ್ನಲ್ಲಿ ದಾಸ್ ಪತಿ ಸಲ್ಲಿಸಿದ್ದ ದೂರಿನ ಮೇರೆಗೆ ಎಎಚ್ಆರ್ಸಿ ಥಾಕುರಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು.