ಎನ್ಆರ್ಸಿಯಿಂದ ಸಾವು ಸಂಭವಿಸಿವೆ ಎನ್ನಲು ಜನರಿಗೆ ಲಂಚ: ಬಿಜೆಪಿ ನಾಯಕನ ಆರೋಪ

ದಿಲೀಪ್ ಘೋಶ್
ಕೋಲ್ಕತಾ,ಸೆ.26: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಕೆಲವು ಸಾವುಗಳು ರಾಷ್ಟ್ರೀಯ ಪೌರತ್ವ ನೋಂದಣಿಯ ಪರಿಣಾಮ ಸಂಭವಿಸಿವೆ ಎಂದು ಹೇಳಲು ಜನರಿಗೆ ಲಂಚ ನೀಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಆರೋಪಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ರಾಜ್ಯದಲ್ಲಿ ಪೌರತ್ವ ಸಾಬೀತುಪಡಿಸಲು ದಾಖಲೆಗಳನ್ನು ಕಲೆ ಹಾಕುವ ಕುರಿತು ಉಂಟಾಗಿರುವ ಗೊಂದಲದ ಮಧ್ಯೆ ಈವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ. ಯಾರಿಗೂ ಭಯಪಡುವ ಅಗತ್ಯವಿಲ್ಲ. ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು ತಂದಿದ್ದೇವೆ, ಇದರಿಂದ ಎಲ್ಲ ಭಾರತೀಯರಿಗೂ ಪೌರತ್ವ ದೊರೆಯಲಿದೆ. ಎನ್ಆರ್ಸಿಯಿಂದಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಬೀತುಪಡಿಸಲು 2 ಲಕ್ಷ ರೂ. ಲಂಚ ನೀಡಲಾಗುತ್ತಿದೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿ ನಡೆಸಿದಂತೆ ರಾಜ್ಯದಲ್ಲೂ ಎನ್ಆರ್ಸಿ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ. ನೋಟು ಅಮಾನ್ಯದ ನಂತರ ಸಂಭವಿಸಿದ ಪ್ರತಿಯೊಂದು ಸಾವಿಗೂ, ಅದು ಅಪಘಾತವೇ ಆಗಿರಲಿ ಅಥವಾ ಪಾಕೃತಿಕ ದುರಂತವೇ ಆಗಿರಲಿ, ಕೇಂದ್ರ ಸರಕಾರದ ನೋಟು ರದ್ಧತಿಯ ನಿರ್ಧಾರದ ಜೊತೆ ಸಂಬಂಧ ಕಲ್ಪಿಸಲಾಯಿತು. ಈಗ ಓರ್ವ ವ್ಯಕ್ತಿ ಡೆಂಗ್ನಿಂದ ಸಾವನ್ನಪ್ಪಿದರೂ ಅದಕ್ಕೆ ಎನ್ಆರ್ಸಿ ಕಾರಣ ಎಂದು ಹೇಳಲಾಗುತ್ತಿದೆ ಎಂದು ಘೋಶ್ ತಿಳಿಸಿದ್ದಾರೆ.
ಬಿಜೆಪಿಗೆ ಪಕ್ಷಾಂತರಗೊಂಡ ತನ್ನ ಪಕ್ಷದ ನಾಯಕರನ್ನು ಮರಳಿ ತರಲು ಟಿಎಂಸಿ ಪ್ರಯತ್ನಿಸುತ್ತಿದೆ ಮತ್ತು ಅದಕ್ಕಾಗಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ತಮ್ಮ ಹೆಸರು ನೋಂದಣಿಯಲ್ಲಿ ಇಲ್ಲದಿದ್ದರೂ ಹಿಂದುಗಳು ಭಯಪಡುವ ಅಗತ್ಯವಿಲ್ಲ. ಎನ್ಆರ್ಸಿ ಕೇವಲ ಬಾಂಗ್ಲಾದೇಶ ಮತ್ತು ಇತರ ದೇಶಗಳಿಂದ ಆಗಮಿಸಿರುವ ಮತ್ತು ಆಗಮಿಸುತ್ತಿರುವ ಮುಸ್ಲಿಮರಿಗಾಗಿ ಮಾತ್ರ ಎಂದು ಘೋಶ್ ಸ್ಪಷ್ಟಪಡಿಸಿದ್ದಾರೆ.