ಪ.ಜಾ., ಪ.ಪಂ.ಗಳಿಗೆ ಉದ್ಯೋಗ ನೀಡುವ ಸಂಸ್ಥೆಗಳಿಗೆ ಉತ್ತೇಜಕ: ಕಾನೂನು ಸಚಿವಾಲಯ ಚಿಂತನೆ
ಹೊಸದಿಲ್ಲಿ, ಸೆ. 26: ‘ದೃಢ ಕ್ರಮ’ (ಅಫರ್ಮೆಟಿವ್ ಆ್ಯಕ್ಷನ್)ದ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಸಾರ್ವಜನಿಕ ಹಾಗೂ ಖಾಸಗಿ ಕಂಪೆನಿಗಳಿಗೆ ಉತ್ತೇಜಕಗಳನ್ನು ನೀಡುವ ಕುರಿತು ಕಾರ್ಮಿಕ ಸಚಿವಾಲಯ ಚರ್ಚೆ ನಡೆಸಿದೆ ಎಂದು ಹೇಳಲಾಗುತ್ತಿದೆ.
‘ದೃಢ ಕ್ರಮ’ದ ಅಡಿಯಲ್ಲಿ ಕೈಗಾರಿಕೆ ಸಂಸ್ಥೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಮಾನ ಅವಕಾಶದ ಖಾತರಿ ನೀಡುವುದಕ್ಕೆ ಸ್ವಯಂಪ್ರೇರಿತವಾಗಿ ಬದ್ಧವಾಗಬೇಕು. ಸಿಐಐ ಹಾಗೂ ಅಸೋಚಾಮ್ನಂತಹ ಕೈಗಾರಿಕಾ ಸಂಸ್ಥೆಗಳು ಈ ಪರಿಕಲ್ಪನೆಯನ್ನು ಅನುಸರಿಸುತ್ತಿವೆ. ‘ದೃಢ ಕ್ರಮ’ದ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ನೇಮಕಾತಿ ಉತ್ತೇಜಿಸುವ ಯಾವುದೇ ಪ್ರಸ್ತಾಪವನ್ನು ಸಚಿವಾಲಯ ಪರಿಗಣಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ‘‘ಕಾರ್ಮಿಕರಿಗೆ ಸೌಲಭ್ಯ ನೀಡುವ ‘ದೃಢ ಕ್ರಮ’ದ ವಿವಿಧ ಪ್ರಸ್ತಾಪದ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ’’ ಎಂದರು.
‘‘ಅದರ ಬಗ್ಗೆ ವಿವರ ಕೋರಿದ ಬಳಿಕ ಪ್ರಸ್ತಾಪದ ಇತಿಮಿತಿಗಳ ಬಗ್ಗೆ ಖಚಿತವಾಗಿ ಹೇಳಲು ನಮಗೆ ಸಾಧ್ಯ. ಶೇರುದಾರರೊಂದಿಗೆ ಚರ್ಚೆ ಮಾಡುವ ಸಂದರ್ಭ ನಾವು ಹಲವು ಸಲಹೆಗಳನ್ನು ಸ್ವೀಕರಿಸಿದ್ದೇವೆ.’’ ಎಂದು ಕೈಗಾರಿಕೆ ಸುರಕ್ಷೆ ಬಗೆಗಿನ ಎಫ್ಐಸಿಸಿಐ ಸಮಾವೇಶದ ನೇಪಥ್ಯದಲ್ಲಿ ಸಚಿವರು ತಿಳಿಸಿದರು. ತನ್ನ 136 ಪ್ರಾದೇಶಿಕ ಕಚೇರಿಗಳ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯೋಗಿಗಳ ಬಗ್ಗೆ ಅಂಕಿ-ಅಂಶವನ್ನು ಇಪಿಎಫ್ಒ ಸಂಗ್ರಹಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಲು ಹಾಗೂ ಅವರ ನೇಮಕಾತಿ ಉತ್ತೇಜಿಸಲು ವಿವಿಧ ಉತ್ತೇಜಕಗಳ ಆರ್ಥಿಕ ಪರಿಣಾಮಗಳನ್ನು ಅಂದಾಜಿಸಲು ಸರಕಾರದ ಚಿಂತನ ಚಿಲುಮೆ ನೀತಿ ಆಯೋಗದ ಪ್ರಮುಖ ಯೋಜನೆ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಮೂಲಕ ಕಾನೂನು ಸಚಿವಾಲಯ ಆಂಕಿ-ಅಂಶವನ್ನು ಸಂಗ್ರಹಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.