ಅಣ್ಣಾ ವಿ.ವಿ.ಯಲ್ಲಿ ಸಂಸ್ಕೃತ ಹೇರಿಕೆ: ಡಿಎಂಕೆ, ಎಡರಂಗ ತೀವ್ರ ವಿರೋಧ

ಚೆನ್ನೈ, ಸೆ. 26: ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಹೇರುತ್ತಿರುವುದಕ್ಕೆ ಡಿಎಂಕೆ ಹಾಗೂ ಎಡರಂಗ ಬುಧವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಸ್ವಾಮಿತ್ವಕ್ಕೆ ಒಳಪಟ್ಟ ಪ್ರಮುಖ ತಾಂತ್ರಿಕ ವಿಶ್ವವಿದ್ಯಾನಿಲಯವಾದ ಅಣ್ಣಾ ವಿಶ್ವವಿದ್ಯಾನಿಲಯ ತನ್ನ ಎಂಜಿನಿಯರಿಂಗ್ ಪಠ್ಯ ಕ್ರಮದಲ್ಲಿ ತತ್ತಶಾಸ್ತ್ರವನ್ನು ಸೇರಿಸುವ ಚಿಂತನೆ ನಡೆಸಿದ್ದು, ಇದು ಸಂಸ್ಕೃತ ಹೇರುವ ಪ್ರಯತ್ನ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಎಂಜಿನಿಯರಿಂಗ್ ಪಠ್ಯ ಕ್ರಮದಲ್ಲಿ ಸಂಸ್ಕೃತ ಹೇರಲಾಗುತ್ತಿದೆ ಎಂಬುದನ್ನು ಅಣ್ಣಾ ವಿಶ್ವವಿದ್ಯಾನಿಲಯ ನಿರಾಕರಿಸಿದೆ. ‘‘ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಯಾವುದೇ ಕೋರ್ಸ್ ಕಡ್ಡಾಯವಲ್ಲ. ಅವರು ತಮಗೆ ಬೇಕಾದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು’’ ಎಂದು ಅಣ್ಣಾ ವಿಶ್ವವಿದ್ಯಾನಿಲಯದ ಉಪ ಕುಲಪತಿ ಎಂ.ಕೆ. ಸೂರಪ್ಪ ತಿಳಿಸಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯ ಕ್ರಮದಲ್ಲಿ ತತ್ವಶಾಸ್ತ್ರ ಹಾಗೂ ಭಗವದ್ಗೀತೆಯನ್ನು ಸೇರಿಸುವ ಉದ್ದೇಶವನ್ನು ಅಣ್ಣಾ ವಿಶ್ವವಿದ್ಯಾನಿಲಯ ಹೊಂದಿದೆ ಎಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು. ವಿಶ್ವವಿದ್ಯಾನಿಲಯದ ಈ ಕ್ರಮ ವಿರೋಧಿಸಿರುವ ಎಂ.ಕೆ. ಸ್ಟಾಲಿನ್ ವಿಶ್ವವಿದ್ಯಾನಿಲ ಯದ ಕುಲಪತಿಯಾಗಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. ಅಣ್ಣಾ ವಿಶ್ವವಿದ್ಯಾನಿಲಯದ ಸಿಇಜಿ ಕ್ಯಾಂಪಸ್ನ ಪಠ್ಯಕ್ರಮದಲ್ಲಿ ತತ್ವಶಾಸ್ತ್ರವನ್ನು ಕಡ್ಡಾಯಗೊಳಿಸುವ ಮೂಲಕ ಸಂಸ್ಕೃತ ಹೇರುವುದು ಖಂಡನೀಯ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.