ನಾವೆಂದೂ ಭಾರತದಡಿ ಇರಲಿಲ್ಲ; ಇರುವುದೂ ಇಲ್ಲ: ನಾಗಾ ಪ್ರತ್ಯೇಕತಾವಾದಿ ನಾಯಕ

ಕ್ಯಾಂಪ್ ಹೆಬ್ರಾನ್ (ನಾಗಾಲ್ಯಾಂಡ್): ಭಾರತದಲ್ಲಿ ನಾಗಾ ಪ್ರಾಂತ್ಯವನ್ನು ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಎನ್ಎಸ್ಸಿಎನ್-ಐಎಂ ಪ್ರಧಾನ ಕಾರ್ಯದರ್ಶಿ ತುಯಿಂಗಾಲೆಂಗ್ ಮ್ಯೂವಾ ಸ್ಪಷ್ಟಪಡಿಸಿದ್ದಾರೆ.
ದಶಕದಷ್ಟು ಹಳೆಯ ವಿವಾದಕ್ಕೆ ಅಕ್ಟೋಬರ್ ತಿಂಗಳ ಒಳಗಾಗಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಿದ್ಧಪಡಿಸಿದ ಒಪ್ಪಂದದ ಚೌಕಟ್ಟಿನಲ್ಲಿ "ಸೇರ್ಪಡೆ" ಎಂಬ ಪದವನ್ನು ಕೇಂದ್ರ ಸರ್ಕಾರ ತಪ್ಪಾಗಿ ವಿಶ್ಲೇಷಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
"ನಾವೆಂದೂ ಭಾರತದಡಿ ಇರಲಿಲ್ಲ; ಇರುವುದೂ ಇಲ್ಲ. ಅಂತಿಮ ಪರಿಹಾರದಲ್ಲಿ ನಾಗಾಗಳನ್ನು ಭಾರತ ದೇಶದಲ್ಲಿ ಸೇರಿಸಿಕೊಳ್ಳುವುದಾದರೆ, ಏನೇ ಎದುರಾದರೂ ನಾವು ಅದನ್ನು ಸ್ವೀಕರಿಸುವುದಿಲ್ಲ, ಕ್ಷಮಿಸಿ" ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ 86 ವರ್ಷದ ಅವರು ಹೇಳಿದರು.
ಭಾರತ ಸರ್ಕಾರ "ಸೇರ್ಪಡೆ" ಎಂಬ ಪದವನ್ನು ತಪ್ಪಾಗಿ ವಿಶ್ಲೇಷಿಸಿರುವುದು ಶಾಂತಿ ಮಾತುಕತೆಗೆ ಇರುವ ಅತಿದೊಡ್ಡ ತಡೆ ಎಂದು ಅಭಿಪ್ರಾಯಪಟ್ಟರು. "ವಾಸ್ತವವಾಗಿ ಈ ಪದದ ಅರ್ಥವೆಂದರೆ, ಒಪ್ಪಿಕೊಂಡ ಎಲ್ಲ ಅಂಶಗಳನ್ನು ಪರಿಹಾರದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದು. ನಾಗಾಗಳನ್ನು ಭಾರತ ದೇಶದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದಲ್ಲ. ಈ ಬಗ್ಗೆ ಸಂಘಟನೆಯಲ್ಲಿ ಯಾವ ಗೊಂದಲವೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
ನಾಗಾಲ್ಯಾಂಡ್ ರಾಜ್ಯಪಾಲ ಹಾಗೂ ಸಂಧಾನಕಾರ ಆರ್.ಎನ್.ರವಿಯವರು ಕಳೆದ ತಿಂಗಳು ನಾಗಾ ಸಮಾಜಕ್ಕೆ ಮಾಹಿತಿ ನೀಡಿ, ಪ್ರಧಾನಿ ಮೋದಿ ಶಾಂತಿ ಪ್ರಕ್ರಿಯೆಯನ್ನು ಅಕ್ಟೋಬರ್ ಒಳಗಾಗಿ ಮುಗಿಸಬೇಕು ಎಂದು ಸೂಚಿಸಿದ್ದಾರೆ. ಹೀಗೆ ಕಾಲಮಿತಿ ನಿಗದಿಪಡಿಸುವುದು ಎನ್ಎಸ್ಸಿಎನ್-ಐಎಂಗೆ ಗಡುವು ನೀಡಿದಂತೆ ಎಂದು ಹೇಳಿದರು.
"ಮೂರು ತಿಂಗಳ ಒಳಗಾಗಿ ನಾಗಾಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಬೇಕು ಎಂದು ಹೇಳಿದ್ದಾರೆ. ಈ ಗಡುವನ್ನು ನಾವು ತಿರಸ್ಕರಿಸಿದ್ದೇವೆ. ಇಂದಾಗಲೀ, ನಾಳೆಯಾಗಲೀ ನಾವದನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಬಂಡುಕೋರ ಮುಖಂಡ ನಿರಾಕರಿಸಿದರು.
ನಾಗಾಗಗಳಿಗೆ ಪ್ರತ್ಯೇಕ ಧ್ವಜ ಮತ್ತು ಪ್ರತ್ಯೇಕ ಸಂವಿಧಾನ ಬೇಕೇಬೇಕು ಎಂದು ಸಂಘಟನೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಎನ್ಎಸ್ಸಿಎನ್-ಐಎಂ ನಡುವಿನ ಸಂಧಾನ ಮಾತುಕತೆಗಳು ಎರಡು ದಶಕಗಳಿಂದ ಕಗ್ಗಂಟಾಗಿಯೇ ಉಳಿದಿವೆ.