ಇಲಾಖಾ ತನಿಖೆಯಲ್ಲಿ ಡಾ. ಕಫೀಲ್ ಖಾನ್ ದೋಷಮುಕ್ತ
ಗೋರಖ್ ಪುರ ಆಸ್ಪತ್ರೆ ದುರಂತ

ಲಕ್ನೋ: ಆಗಸ್ಟ್ 2017ರಲ್ಲಿ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದ 60ಕ್ಕೂ ಹೆಚ್ಚು ಮಕ್ಕಳು ಬಲಿಯಾದ ಘಟನೆಯ ನಂತರ ಸೇವೆಯಿಂದ ಅಮಾನತುಗೊಂಡಿದ್ದ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರನ್ನು ಘಟನೆ ನಡೆದು ಎರಡು ವರ್ಷಗಳ ನಂತರ ಇಲಾಖಾ ತನಿಖೆ ದೋಷಮುಕ್ತಗೊಳಿಸಿದೆ.
ಡಾ. ಕಫೀಲ್ ಖಾನ್ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪ ಆರೋಪ ಹೊರಿಸಲಾಗಿತ್ತು. ಈಗ ಈ ಆರೋಪಗಳಿಂದ ಅವರು ಮುಕ್ತರಾಗಿದ್ದಾರೆ. ಈ ಇಲಾಖಾ ತನಿಖೆಯ ವರದಿಯನ್ನು ಬಿಆರ್ ಡಿ ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಗುರುವಾರ ಡಾ. ಕಫೀಲ್ ಖಾನ್ ಅವರಿಗೆ ಹಸ್ತಾಂತರಿಸಿದ್ದಾರೆ.
ಆದರೆ ಈ ವರದಿ ಹೊರ ಬರುವಷ್ಟರ ಹೊತ್ತಿಗೆ ಡಾ. ಖಾನ್ ಅವರು ಈಗಾಗಲೇ ತಾವು ಮಾಡಿರದ ತಪ್ಪಿಗೆ ಒಂಬತ್ತು ತಿಂಗಳು ಸೆರೆವಾಸ ಅನುಭವಿಸಿದ್ದಾರೆ. ಆದರೆ ಅವರು ಜಾಮೀನಿನ ಮೇಲೆ ಹೊರಗಿದ್ದರೂ ಬಿಆರ್ ಡಿ ಮೆಡಿಕಲ್ ಕಾಲೇಜು ಇಲ್ಲಿಯ ತನಕ ಅವರ ವಜಾ ಆದೇಶವನ್ನು ವಾಪಸ್ ತೆಗೆದುಕೊಂಡಿರಲಿಲ್ಲ. ಡಾ. ಖಾನ್ ಈಗಾಗಲೇ ಘಟನೆ ಕುರಿತಂತೆ ಸಿಬಿಐ ತನಿಖೆಗೆ ಕೋರಿದ್ದಾರೆ.
ಇಲಾಖಾ ತನಿಖೆಯ ವರದಿಯನ್ನು ತನಿಖಾಧಿಕಾರಿ, ಅಂಚೆ ಚೀಟಿ ಹಾಗೂ ನೋಂದಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಿಮಾಂಶು ಕುಮಾರ್ ಅವರು ಉತ್ತರ ಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಎ.18ರಂದು ನೀಡಿದ್ದರು. ಈ 15 ಪುಟಗಳ ವರದಿಯಲ್ಲಿ ಡಾ. ಕಫೀಲ್ ಖಾನ್ ಅವರು ವೈದ್ಯಕೀಯ ನಿರ್ಲಕ್ಷ್ಯ ತೋರಿಸಿಲ್ಲ ಹಾಗೂ 54 ಗಂಟೆಗಳ ತನಕ ಆಸ್ಪತ್ರೆ ಆಮ್ಲಜನಕ ಕೊರತೆ ಅನುಭವಿಸುತ್ತಿದ್ದಾಗ 2017ರ ಆಗಸ್ಟ್ 10,11ರಂದು ರಾತ್ರಿ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಸರ್ವ ಪ್ರಯತ್ನ ನಡೆಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ ಡಾ. ಖಾನ್ ಅವರು ಆಗಸ್ಟ್ 2016ರ ತನಕ ಖಾಸಗಿ ಪ್ರಾಕ್ಟೀಸ್ ಮಾಡುತ್ತಿದ್ದರು ಆದರೆ ನಂತರ ಮಾಡಿಲ್ಲ ಎಂಬ ಅಂಶವನ್ನೂ ವರದಿ ಪರಿಗಣಿಸಿದೆ.
ಡಾ. ಕಫೀಲ್ ಖಾನ್ ಅವರು ಬಿಆರ್ ಡಿ ಆಸ್ಪತ್ರೆಯ ಎನ್ಸಿಫಾಲಿಟಿಸ್ ವಾರ್ಡಿನ ಉಸ್ತುವಾರಿ ನೋಡಲ್ ವೈದ್ಯಕೀಯ ಅಧಿಕಾರಿಯಾಗಿರಲಿಲ್ಲ ಎಂದು ತನಿಖಾ ವರದಿ ಹೇಳಿದೆ ಹಾಗೂ ಅವರು ವಾರ್ಡಿನ ಅಧಿಕಾರಿಯಾಗಿದ್ದರು ಎಂದು ಇಲಾಖೆ ಸಲ್ಲಿಸಿರುವ ದಾಖಲೆಗಳು ''ಸಾಕಾಗದು ಹಾಗೂ ಸರಿಯಾಗಿಲ್ಲ'' ಎಂದು ತಿಳಿಸಿದೆ.
ಸಹಾಯಕ ಪ್ರೊ. ಭೂಪೇಂದ್ರ ಶರ್ಮ ಅವರು ಮೇ 11, 2016ರಿಂದ ವಾರ್ಡಿನ ಉಸ್ತುವಾರಿಯಾಗಿದ್ದರು ಎಂಬುದನ್ನು ಉತ್ತರ ಪ್ರದೇಶ ಸರಕಾರ ಒಪ್ಪಿರುವ ಕುರಿತಂತೆ ಡಾ. ಕಫೀಲ್ ಸಲ್ಲಿಸಿದ ಆರ್ ಟಿ ಐ ಅರ್ಜಿಗೆ ದೊರೆತ ಉತ್ತರವನ್ನೂ ವರದಿ ಪರಿಗಣಿಸಿದೆ.
ಡಾ. ಖಾನ್ ಅವರು ತಮ್ಮ ಹಿರಿಯ ಅಧಿಕಾರಿಗಳಿಗೆ ಆಮ್ಲಜನಕ ಕೊರತೆಯ ಬಗ್ಗೆ ತಿಳಿಸಿದ್ದರು ಹಾಗೂ ಈ ಕುರಿತಾದ ಕರೆ ಮಾಹಿತಿ ವಿವರಗಳನ್ನೂ ತನಿಖಾಧಿಕಾರಿಗಳಿಗೆ ನೀಡಿದ್ದರಲ್ಲದೆ ತಾವು ವೈಯಕ್ತಿಕ ನೆಲೆಯಲ್ಲಿ ಏಳು ಆಮ್ಲಜನಕ ಸಿಲಿಂಡರುಗಳನ್ನು ದುರಂತ ನಡೆದ ರಾತ್ರಿ ಏರ್ಪಾಡು ಮಾಡಿದ್ದರ ಕುರಿತಂತೆಯೂ ತನಿಖಾಧಿಕಾರಿಗಳಿಗೆ ತಿಳಿಸಿದ್ದರು.
''ಸರಕಾರ ಈ ದುರಂತಕ್ಕೆ ಕಾರಣರಾದವರ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದೇ ಇದ್ದರೂ ನನ್ನನ್ನು ಬಲಿಪಶುವನ್ನಾಗಿಸಲಾಗಿದೆ. ಈ ವರದಿಯನ್ನು ಇಲ್ಲಿಯ ತನಕ ನನಗೆ ಕಳುಹಿಸಲಾಗಿರಲಿಲ್ಲ. ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆ ನನ್ನ ಖಾಸಗಿ ಪ್ರಾಕ್ಟೀಸ್ ವಿರುದ್ಧ ಪ್ರಕರಣದ ಕುರಿತಂತೆ ವಿವರಣೆ ಕೇಳಿದೆ, ಇದಕ್ಕೂ ದುರಂತಕ್ಕೂ ಸಂಬಂಧವಿಲ್ಲ, ಸರಕಾರ ಕ್ಷಮೆ ಯಾಚಿಸಬೇಕು, ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಹಾಗೂ ಘಟನೆಯ ಸಿಬಿಐ ತನಿಖೆ ನಡೆಸಬೇಕು'' ಎಂದು ಅವರು ಆಗ್ರಹಿಸಿದ್ದಾರೆ.