ಪ್ರಧಾನಿ ಜೊತೆ ಮಾತನಾಡುವ ಧೈರ್ಯ ನಿಮಗೆ ಇಲ್ಲದಿದ್ದರೆ ನಾವೂ ಒಟ್ಟಿಗೆ ಬರುತ್ತೇವೆ
ಬಿಎಸ್ವೈ ವಿರುದ್ಧ ಎಚ್ಡಿಕೆ ಆಕ್ರೋಶ

ಬೆಂಗಳೂರು, ಸೆ. 27: ‘ಯಡಿಯೂರಪ್ಪನವರೇ, ನಿಮಗೆ ಹಾಗೂ 25 ಬಿಜೆಪಿಯ ಸಂಸದರಿಗೆ ಪ್ರಧಾನಮಂತ್ರಿಗಳ ಜೊತೆ ರಾಜ್ಯದ ನೆರೆ ಪರಿಸ್ಥಿತಿಯ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲ ಎಂದಾದರೆ ನಾವೂ ನಿಮ್ಮ ಜೊತೆ ದೆಹಲಿಗೆ ಬರುತ್ತೇವೆ. ಸರ್ವ ಪಕ್ಷ ನಿಯೋಗದ ಜೊತೆ ಪ್ರಧಾನಿಗಳನ್ನು ಭೇಟಿ ಮಾಡೋಣ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
‘ರಾಜ್ಯದಲ್ಲಿರುವುದು ತುಘಲಕ್ ಸರಕಾರ ಮಾತ್ರ ಅಂತ ಅಂದುಕೊಂಡಿದ್ದೆ. ಆದರೆ, ಈ ಸರಕಾರಕ್ಕೆ ಕಣ್ಣು-ಕಿವಿ ಯಾವುದೂ ಇಲ್ಲ. ನೆರೆ ಬಂದು ಒಂದೂವರೆ ತಿಂಗಳಾದರೂ ನಿರಾಶ್ರಿತರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ’ ಎಂದು ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಟೀಕಿಸಿದ್ದಾರೆ.
ಅತೃಪ್ತರು ಗ್ಯಾಂಗ್ರೀನ್: ‘ಹಣದ ಆಸೆಗಾಗಿ ಮೈತ್ರಿ ಸರಕಾರವನ್ನು ಬೀಳಿಸಿದ ಅತೃಪ್ತ ಶಾಸಕರು ಬಿಜೆಪಿಯ ಕಣ್ಣಿಗೆ ದೇವರಂತೆ ಕಂಡಿದ್ದರು. ಈಗ ಅದೇ ಅತೃಪ್ತರನ್ನು ಎರಡೆ ತಿಂಗಳಿನಲ್ಲಿ ಬಿಜೆಪಿಯ ಉಪಮುಖ್ಯಮಂತ್ರಿಗಳು ದರಿದ್ರ ಮಕ್ಕಳು ಎಂದು ಕರೆಯುತ್ತ ತಿರುಗಾಡುತ್ತಿದ್ದಾರೆ. ಅತೃಪ್ತರು ಗ್ಯಾಂಗ್ರೀನ್ ಇದ್ದ ಹಾಗೆ, ಬಿಜೆಪಿಗೂ ಇದೀಗ ಅದರ ಅರಿವಾದಂತಿದೆ’ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.





