ನಾವು ಜಗತ್ತಿಗೆ ನೀಡಿದ್ದು ಯುದ್ಧವನ್ನಲ್ಲ, ಬುದ್ಧನನ್ನು: ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮೋದಿ
ವಿಶ್ವಸಂಸ್ಥೆ, ಸೆ. 27: ಜಗತ್ತು ಒಟ್ಟಾಗಿ ಭಯೋತ್ಪಾದನೆಯ ವಿರುದ್ಧ ಒಮ್ಮತದಿಂದ ಹೋರಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘‘ಭಯೋತ್ಪಾದನೆಯು ಮಾನವಕುಲದ ಎದುರು ಇರುವ ಅತ್ಯಂತ ದೊಡ್ಡ ಸವಾಲುಗಳ ಪೈಕಿ ಒಂದಾಗಿದೆ’’ ಎಂದು ವಿಶ್ವಸಂಸ್ಥೆಯ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
ಭಯೋತ್ಪಾದನೆಯು ಮನುಕುಲಕ್ಕೆ ಏನು ಮಾಡುತ್ತಿದೆ ಎಂಬ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಆಕ್ರೋಶ ವ್ಯಕ್ತವಾಗಬೇಕಾಗಿದೆ ಎಂದು ತನ್ನ 20 ನಿಮಿಷಗಳ ಭಾಷಣದಲ್ಲಿ ಪಾಕಿಸ್ತಾನವನ್ನು ಹೆಸರಿಸದೆ ಮೋದಿ ಹೇಳಿದರು.
‘‘ಜಗತ್ತಿಗೆ ಯುದ್ಧವನ್ನಲ್ಲ, ಬುದ್ಧನನ್ನು ನೀಡಿದ ದೇಶಕ್ಕೆ ನಾವು ಸೇರಿದವರು’’ ಎಂದು ಪ್ರಧಾನಿ ನುಡಿದರು.
ವಿಭಜನೆಗೊಂಡ ಜಗತ್ತಿನಿಂದ ಯಾರಿಗೂ ಒಳಿತಾಗುವುದಿಲ್ಲ ಎಂದು ಅವರು ಹೇಳಿದರು. ‘‘ನಮ್ಮ ಗಡಿಗಳ ಒಳಗೆ ನಮ್ಮನ್ನು ಸೀಮಿತಗೊಳಿಸುವುದೂ ಸಾಧ್ಯವಿಲ್ಲ. ಬಹುಪಕ್ಷೀಯತೆ ಈಗಿನ ಅಗತ್ಯವಾಗಿದೆ, ನಮಗೆ ಹೊದ ದಾರಿಯ ಅಗತ್ಯವಿದೆ’’ ಎಂದರು.
‘‘ಸ್ವಾಮಿ ವಿವೇಕಾನಂದ ಧಾರ್ಮಿಕ ಸಂಸತ್ತಿಗೆ ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡಿದರೇ ಹೊರತು, ಭಿನ್ನಮತವನ್ನಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ (ಭಾರತ)ಯು ಜಗತ್ತಿಗೆ ಈಗಲೂ ಇದೇ ಸಂದೇಶವನ್ನು ನೀಡುತ್ತದೆ- ಸಾಮರಸ್ಯ ಮತ್ತು ಶಾಂತಿ’’ ಎಂದು ಮೋದಿ ನುಡಿದರು.