ಎರಡನೆ ಬಾರಿಗೆ ಸಮವಸ್ತ್ರ ವಿತರಿಸಲು ಬದ್ಧ: ಸಚಿವ ಎಸ್.ಸುರೇಶ್ ಕುಮಾರ್
![ಎರಡನೆ ಬಾರಿಗೆ ಸಮವಸ್ತ್ರ ವಿತರಿಸಲು ಬದ್ಧ: ಸಚಿವ ಎಸ್.ಸುರೇಶ್ ಕುಮಾರ್ ಎರಡನೆ ಬಾರಿಗೆ ಸಮವಸ್ತ್ರ ವಿತರಿಸಲು ಬದ್ಧ: ಸಚಿವ ಎಸ್.ಸುರೇಶ್ ಕುಮಾರ್](https://www.varthabharati.in/sites/default/files/images/articles/2019/09/27/212221-1569606130.jpg)
ಬೆಂಗಳೂರು, ಸೆ.27: ಪ್ರಸ್ತುತ ಶೈಕ್ಷಣಿಕ ಸಾಲಿನೊಳಗೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡನೆ ಬಾರಿಗೆ ಸಮವಸ್ತ್ರ ವಿತರಿಸಲು ಬದ್ಧ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಶುಕ್ರವಾರ ನಗರದ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ, ಸಂವಾದ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇತ್ತೀಚಿಗೆ ಕೆಲ ಗೊಂದಲ ಉಂಟಾಗಿತ್ತು. ಹಾಗಾಗಿಯೇ, ಸಮವಸ್ತ್ರ ಎರಡು ಬಾರಿ ನೀಡುವುದಿಲ್ಲ ಎಂದಿದ್ದೆ. ಆದರೆ, ಸರಕಾರ ಸಮವಸ್ತ್ರ ನೀಡಲು ಬದ್ಧವಾಗಿದ್ದು, ಈ ಸಂಬಂಧ ಹಣಕಾಸು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆಯೂ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕ ಭಾಗದ ಜನರ ಅಭಿವೃದ್ಧಿಗೆ ಸರಕಾರವು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಇದರ ಜೊತೆಗೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ, ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಕಲಿಕೆ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುವುದು ಎಂದರು.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ಇದೆ. ಅಲ್ಲದೆ, ಈ ಹಿಂದಿನ ಸರಕಾರದ ಮುಂದುವರೆದ ಭಾಗವಾಗಿ, ಈಗ ನಮಗೆ ಕಷ್ಟ ಎದುರಾಗಿದ್ದು, ಈ ವರ್ಗಾವಣೆಯೂ ಮೇ ಮಾಸದೊಳಗೆ ಮುಗಿದರೆ ಮಾತ್ರ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಸುರೇಶ್ಕುಮಾರ್ ಭರವಸೆ ನೀಡಿದರು.
ಬೇಡಿಕೆ ಈಡೇರಿಸಿ: ಪ್ರತಿ ವಿಷಯಕ್ಕೆ ಓರ್ವ ಶಿಕ್ಷಕರನ್ನು ಪರಿಗಣಿಸಬೇಕು. 6ನೆ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯ ಗುರುಗಳಿಗೆ ಭಡ್ತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಂಘದ ಮುಖಂಡರು ಸಚಿವರಿಗೆ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.