18,000 ರೂ. ದಂಡ ಹಾಕಿದಕ್ಕೆ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರಿಕ್ಷಾ ಚಾಲಕ

ಅಹ್ಮದಾಬಾದ್, ಸೆ.28: ಮೋಟರ್ ವಾಹನ ತಿದ್ದುಪಡಿ ಕಾಯ್ದೆ -2019 ಅಧಿಕೃತವಾಗಿ ಜಾರಿಗೊಂಡ ಬಳಿಕ ದೇಶದ ಅಲ್ಲಲ್ಲಿ ಚಾಲಕರು ತೊಂದರೆ ಅನುಭವಿಸಿದ್ದಾರೆ. ಕೆಲವರು ದಂಡ ಕಟ್ಟಿ ಸುಸ್ತಾಗಿದ್ದಾರೆ. ಆಟೋ ಚಾಲಕನೊಬ್ಬ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವುದು ಹೊಸ ಸೇರ್ಪಡೆ. ರಾಜು ಸೋಲಂಕಿ ಆತ್ಮಹತ್ಯೆಗೆ ಯತ್ನಿಸಿದ ರಿಕ್ಷಾ ಚಾಲಕ.
ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ರಾಜು ಸೋಳಂಕಿಗೆ ಪೊಲೀಸರು 18,000 ರೂ. ದಂಡ ವಿಧಿಸಿದ್ದರು. ರಾಜು ದಂಡ ಕಟ್ಟಿರಲಿಲ್ಲ. ಇದಕ್ಕಾಗಿ ಆತನ ರಿಕ್ಷಾವನ್ನು ಮುಟ್ಟುಗೋಲು ಹಾಕಲಾಗಿತ್ತು. ಇದರಿಂದ ನೊಂದುಕೊಂಡ ರಾಜು ಆತ್ಮಹತ್ಯೆಗೆ ಯತ್ನಿಸಿದರೆನ್ನಲಾಗಿದೆ.
ರಾಜು ಆರ್ಥಿಕವಾಗಿ ಹಿಂದುಳಿದವರು. ರಿಕ್ಷಾವನ್ನು ಮುಟ್ಟುಗೋಲು ಹಾಕಿದ ಹಿನ್ನೆಲೆಯಲ್ಲಿ ಆತನಿಗೆ ಕೆಲಸವಿಲ್ಲದಾಗಿದೆ. ಇದರಿಂದ ಬೇರೆ ಕಾಣದೆ ಆತ್ಮಹತ್ಯೆಗೆ ಯತ್ನ ನಡೆಸಿರುವುದಾಗಿ ಆತ ಹೇಳಿದ್ದಾನೆ.
ರಾಜು ಬಿ.ಕಾಂ ಪದವೀಧರ. ಆದರೆ ಆತನಿಗೆ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಆಟೋ ಚಾಲಕನಾಗಿ ದುಡಿಯುತ್ತಿದ್ದನು. ಆತ್ಮಹತ್ಯೆಗೆ ಯತ್ನಿಸಿದ ರಾಜುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.