ಮಂಗಳೂರು: ಯಕ್ಷಗಾನ ಪಠ್ಯ ಪುಸ್ತಕ ಮಾರುಕಟ್ಟೆಗೆ
ಮಂಗಳೂರು, ಸೆ.28: ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪ್ರಥಮ ಅವಧಿಯ ಮಹತ್ವಾಕಾಂಕ್ಷಿ ಯಕ್ಷ ಶಿಕ್ಷಣ ಯೋಜನೆ ಯಡಿ ಕರಾವಳಿ ಯಕ್ಷಗಾನ ಚರಿತ್ರೆಯ ಪ್ರಥಮ ಯಕ್ಷಗಾನ ಪಠ್ಯಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಈ ಪಠ್ಯಪುಸ್ತಕದ ಆಧಾರದಲ್ಲಿ ಖಾಸಗಿಯಾಗಿ ಗುರುಮುಖೇನ ಯಕ್ಷಗಾನ ಮುಮ್ಮೇಳ ಕಲಿಯಬಹುದು. ನಂತರ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನ ಜೂನಿಯರ್ ಪರೀಕ್ಷೆಗೆ ಬರೆದು ಸರ್ಟಿಫಿಕೇಟ್ ಪಡೆದುಕೊಳ್ಳಬಹುದು ಎಂದು ಯಕ್ಷಗಾನ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಡಾ.ಸುಂದರ ಕೇನಾಜೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂನಿಯರ್ ಪರೀಕ್ಷೆ ಬರೆಯಲು ಕನಿಷ್ಠ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಸೀನಿಯರ್ ಪಠ್ಯ ಆ ಹೊತ್ತಿಗಾಗಲೇ ಮುದ್ರಣಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಕೂಡ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ನಂತರ ವಿದ್ವತ್ ಎರಡು ಹಂತದಲ್ಲಿ ನಡೆಯಲಿದೆ. ಇದಕ್ಕೆ ಪಠ್ಯವಸ್ತುವಿನಿಂದ ಹಿಡಿದು ಪುಸ್ತಕ ರಚನೆ ಹಾಗೂ ಇತರ ಕಾರ್ಯಗಳು ನಡೆಯಬೇಕಾಗಿದೆ ಎಂದರು.
ಮಾರುಕಟ್ಟೆಗೆ ಬಂದಿರುವ ಪ್ರಾಥಮಿಕ ವಿಭಾಗದ ಈ ಪಠ್ಯಪುಸ್ತಕದಲ್ಲಿ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದ ಕಲಿಕಾ ವಿಷಯಗಳನ್ನು ಒಳಗೊಂಡಿದೆ. ಒಟ್ಟು ನಾಲ್ಕು ಪ್ರಮುಖ ಅಧ್ಯಾಯಗಳಲ್ಲಿ ಮತ್ತೆ ಘಟಕಗಳನ್ನು ವಿಭಾಗಿಸಿ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ರೂಪಿಸಲಾಗಿದೆ. ತೆಂಕು ಮತ್ತು ಬಡಗಿನ ಸಮಾನ ಅಂಶಗಳನ್ನು ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪ್ರತ್ಯೇಕ ಘಟಕಗಳಲ್ಲಿ ವಿವರಣೆ ನೀಡಲಾಗಿದೆ.
ಅಧ್ಯಾಯ ಒಂದರಲ್ಲಿ ಯಕ್ಷಗಾನದ ಸ್ವರೂಪಕ್ಕೆ ಸಂಬಂಧಿಸಿದಂತೆ ಯಕ್ಷಗಾನದ ಪರಿಚಯ, ಅದರ ಅಂಗಗಳು ಮತ್ತು ಇತಿಹಾಸವನ್ನು ವಿವರಿಸಲಾಗಿದೆ. ಅಧ್ಯಾಯ ಎರಡರಲ್ಲಿ ಯಕ್ಷಗಾನದ ರಂಗಸ್ಥಳ ಹಾಗೂ ವೇಷಭೂಷಣಗಳ ಬಗ್ಗೆ ತಿಳಿಸುತ್ತಾ ಚೌಕಿ ಮತ್ತು ರಂಗಸ್ಥಳ, ಬಣ್ಣಗಾರಿಕೆ, ವೇಷಭೂಷಣಗಳ ಬಗ್ಗೆ ತಿಳಿಸಲಾಗಿದೆ.
ಅಧ್ಯಾಯ ಮೂರರಲ್ಲಿ ಯಕ್ಷಗಾನ ಪ್ರಸಂಗಗಳು ಮತ್ತು ಅರ್ಥಗಾರಿಕೆಯ ಬಗ್ಗೆ ವಿವರಿಸಲಾಗಿದೆ. ಇಲ್ಲಿ ಮತ್ತೆ ಮೂರು ಘಟಕಗಳನ್ನು ಮಾಡಲಾಗಿದ್ದು ಯಕ್ಷಗಾನ ಪ್ರಸಂಗಗಳು, ಅರ್ಥಗಾರಿಕೆ ಮತ್ತು ಸಂಭಾಷಣೆ, ಅಭ್ಯಾಸಕ್ಕಾಗಿ ಕೆಲವು ಪ್ರಸಂಗಗಳನ್ನು ನೀಡಲಾಗಿದೆ. ಕೊನೆಯ ಹಾಗೂ ಹೆಚ್ಚು ಪ್ರಾಯೋಗಿಕ ಅಧ್ಯಾಯ ಯಕ್ಷಗಾನ ಶಿಕ್ಷಣ. ಇಲ್ಲಿ ಆರು ಘಟಕಗಳನ್ನು ರಚಿಸಲಾಗಿದೆ. ಅದರಲ್ಲಿ ಲಯ, ಕಾಲ, ತಾಳಗಳ ಪರಿಕಲ್ಪನೆ, ತೆಂಕುತಿಟ್ಟು ತಾಳಗಳು ಮತ್ತು ಹೆಜ್ಜೆಗಾರಿಕೆ, ತೆಂಕುತಿಟ್ಟಿನ ರಂಗಕ್ರಮಗಳು, ಬಡಗುತಿಟ್ಟಿನ ತಾಳಗಳು ಮತ್ತು ಹೆಜ್ಜೆಗಾರಿಕೆ, ಬಡಗು ತಿಟ್ಟಿನ ರಂಗಕ್ರಮಗಳು, ಅಭಿನಯ ಮತ್ತು ರಂಗಗತಂತ್ರಗಳು ಇವುಗಳನ್ನು ಅಳವಡಿಸಿಕೊಳ್ಳಲಾಗಿದೆ.
ಎಲ್ಲಾ ಘಟಕಗಳ ಕೊನೆಯಲ್ಲಿ ವೌಲ್ಯಮಾಪನಕ್ಕಾಗಿ ಅಭ್ಯಾಸ ಪ್ರಶ್ನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗಲು ಹಲವು ಸಂಕೇತಗಳನ್ನು ನೀಡಲಾಗಿದೆ. ಈ ಸಂಕೇತಗಳ ಮೂಲಕ ಯಕ್ಷಗಾನವನ್ನು ಅಭ್ಯಾಸ ಮಾಡುವುದು ಇದೇ ಮೊದಲ ಪ್ರಯೋಗವಾಗಿದೆ. ಈ ಪ್ರಯೋಗಕ್ಕೆ ಹೆಚ್ಚಿನ ಕಾಲಾವಕಾಶ ಹಾಗೂ ಪರಿಶ್ರಮ ಹಾಕಲಾಗಿದೆ. ಪಠ್ಯ ತಯಾರಿಯಲ್ಲಿ ಕೆಲವೊಂದು ಲೋಪವಾಗಿರುವ ಸಾಧ್ಯತೆ ಇದೆ. ಅದನ್ನು ಮುಂದಿನ ಹಂತದಲ್ಲಿ ಸರಿಪಡಿಸಿಕೊಳ್ಳಬಹುದು. ಆಸಕ್ತರು ಸರ್ಕಾರಿ ಮುದ್ರಣಾಲಯ ಬೆಂಗಳೂರು 080-22213474, ಮೈಸೂರು 0821-2540684, ಧಾರವಾಡ 0836-2748145 ಗೆ ಸಂಪರ್ಕಿಸಬಹುದು.
ಯಕ್ಷಗಾನ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ಕುಂಬಳೆ ಸುಂದರ ರಾವ್, ಸದಸ್ಯರಾದ ಪ್ರಕಾಶ್ ಮೂಡಿತ್ತಾಯ, ಸುಜಿಯಿಂದ್ರ ಹಂದೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







