ಭಾರತದ ಅರ್ಥವ್ಯವಸ್ಥೆ ದುರ್ಬಲಗೊಳ್ಳಲು ಮೊಘಲರು, ಬ್ರಿಟಿಷರು ಕಾರಣ: ಆದಿತ್ಯನಾಥ್

ಮುಂಬೈ: ಭಾರತದ ಅರ್ಥವ್ಯವಸ್ಥೆ ದುರ್ಬಲಗೊಳ್ಳಲು ಮೊಘಲರು ಹಾಗೂ ಬ್ರಿಟಿಷರು ಕಾರಣ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಮೊಘಲರು ಭಾರತಕ್ಕೆ ಆಗಮಿಸುವ ಮೊದಲು ಭಾರತ ಜಗತ್ತಿನ ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗುವಷ್ಟರಲ್ಲಿ ಅದು ತನ್ನ ಹಿಂದಿನ ವೈಭವದ ನೆರಳಾಗಿ ಮಾತ್ರ ಉಳಿದಿತ್ತು ಎಂದೂ ಆದಿತ್ಯನಾಥ್ ಹೇಳಿಕೊಂಡಿದ್ದಾರೆ.
ಮುಂಬೈಯಲ್ಲಿ ವರ್ಲ್ಡ್ ಹಿಂದು ಇಕಾನಮಿ ಫೋರಂ ಉದ್ದೇಶಿಸಿ ಆದಿತ್ಯನಾಥ್ ಮೇಲಿನ ಮಾತುಗಳನ್ನು ಹೇಳಿದ್ದಾರೆ. ಮೊಘಲರು ಭಾರತಕ್ಕೆ ಆಗಮಿಸುವ ಸಂದರ್ಭ ಜಗತ್ತಿನ ಆರ್ಥಿಕತೆಯ ಮೂರನೇ ಒಂದರಷ್ಟು ಪಾಲು ಭಾರತದ್ದಾಗಿತ್ತು ಎಂದೂ ಅವರು ಹೇಳಿದ್ದಾರೆ. "ಮುಘಲರು ದೇಶ ಬಿಟ್ಟು ಹೋಗಿ ಬ್ರಿಟಿಷರು ಆಗಮಿಸಿದಾಗ ಭಾರತ ವಿಶ್ವದ ಆರ್ಥಿಕತೆಯ ಶೇ. 36ರಿಂದ ಶೇ. 10ಕ್ಕೆ ಇಳಿದಿತ್ತು, ಎಂದ ಆದಿತ್ಯನಾಥ್ ಬ್ರಿಟಿಷರು ಈ ದೇಶವನ್ನು 200 ವರ್ಷ ಆಳಿ ತೆರಳುವಾಗ ಅದರ ಆರ್ಥಿಕತೆಯನ್ನು ಶೇ. 4ಕ್ಕೆ ಇಳಿಸಿದ್ದರು ಎಂದರು.
ಮುಂದಿನ ವರ್ಷಗಳಲ್ಲಿ ಉತ್ತರ ಪ್ರದೇಶ ರಾಜ್ಯವೊಂದನ್ನೇ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವುದಾಗಿ ಇತ್ತೀಚೆಗೆ ಆದಿತ್ಯನಾಥ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.