ಸರ್ವೋಚ್ಚ ನ್ಯಾಯಾಲಯ ವಿಭಜನೆಗೆ ವೆಂಕಯ್ಯ ನಾಯ್ಡು ಒಲವು

ಹೊಸದಿಲ್ಲಿ,ಸೆ.28: ನ್ಯಾಯ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಈ ಸಮಸ್ಯೆಯನ್ನು ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯವನ್ನು ವಿಭಜಿಸುವ ಒಳವು ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ನಡೆದ ಖ್ಯಾತ ನ್ಯಾಯಶಾಸ್ತ್ರಜ್ಞ ಪಿ.ಪಿ ರಾವ್ ಅವರ ಬರಹದ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ಸಾಂವಿಧಾನಿಕ ವಿಷಯಗಳು ಮತ್ತು ಮನವಿಗಳನ್ನು ನಿಬಾಯಿಸಲು ಸರ್ವೋಚ್ಚ ನ್ಯಾಯಾಲಯವನ್ನು ವಿಭಜಿಸಬೇಕು ಮತ್ತು ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಶ್ರೇಷ್ಟ ನ್ಯಾಯಾಲಯದ ನಾಲ್ಕು ಪ್ರಾದೇಶಿಕ ಪೀಠಗಳನ್ನು ರಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಪರಾಷ್ಟ್ರಪತಿಗಳ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನಾಯ್ಡು 130ನೇ ವಿಧಿಯನ್ನು ಉಲ್ಲೇಖಿಸಿದ್ದು ಶ್ರೇಷ್ಟ ನ್ಯಾಯಾಲಯದಲ್ಲಿ ಬದಲಾವಣೆ ಮಾಡಲು ಸಂವಿಧಾನದಲ್ಲಿ ಯಾವುದೇ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ವಿಚಾರಣೆಯ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಾದೇಶಿಕ ಪೀಠಗಳನ್ನು ರಚಿಸುವ ಕುರಿತ ಕಾನೂನು ಮತ್ತು ನ್ಯಾಯ ಸಂಸದೀಯ ಸ್ಥಾಯಿ ಸಮಿತಿಯ ಸಲಹೆಯನ್ನೂ ನಾಯ್ಡು ಈ ವೇಳೆ ಉಲ್ಲೇಖಿಸಿದ್ದಾರೆ. ದಿಲ್ಲಿಯ ಹೊರಗೆ ತನ್ನ ಪೀಠದ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹಲವು ಸಂದರ್ಭಗಳಲ್ಲಿ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದ ಪ್ರಾದೇಶಿಕ ಪೀಠಗಳನ್ನು ದಿಲ್ಲಿ (ಉತ್ತರ), ಚೆನ್ನೈ/ಹೈದರಾಬಾದ್ (ದಕ್ಷಿಣ), ಕೋಲ್ಕತ್ತಾ (ಪೂರ್ವ) ಮತ್ತು ಮುಂಬೈ (ದಕ್ಷಿಣ) ಮುಂತಾದೆಡೆ ರಚಿಸಬೇಕು ಎಂಬ ಸಮಿತಿಯ 2009ಆಗಸ್ಟ್ನ ಸಲಹೆಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿತ್ತು.