ಉಡುಪಿ ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಐದು ಡಯಲಿಸೀಸ್ ಯಂತ್ರ: ಶ್ರೀರಾಮುಲು ಭರವಸೆ

ಉಡುಪಿ, ಸೆ.28: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಆಸ್ಪತ್ರೆ ಸಂಬಂಧ ಇಂದು ಬೆಳಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಶಾಸಕ ರಘುಪತಿ ಭಟ್ ಮಾತನಾಡಿ ಹಲವು ವರ್ಷಗಳ ಬೇಡಿಕೆಯಾಗಿ ರುವ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲು ಹಾಗೂ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಮನವಿ ಮಾಡಿದರು.
ಸದ್ಯ ಜಿಲ್ಲಾಸ್ಪತ್ರೆಯಲ್ಲಿ 10 ಡಯಲಿಸಿಸ್ ಯಂತ್ರಗಳಿದ್ದು, ಇದರಲ್ಲಿ 89 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ 38 ರೋಗಿಗಳು ಹೆಚ್ಚುವರಿ ಯಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ಯಂತ್ರದ ಕೊರತೆ ಇರುವ ಬಗ್ಗೆ ಸರ್ಜನ್ ಡಾ.ಮದುಸೂಧನ್ ನಾಯಕ್ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಹೆಚ್ಚುವರಿಯಾಗಿ ಐದು ಡಯಲಿಸಿಸ್ ಯಂತ್ರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರೆತ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾ ಯಿತು. ಮುಂದೆ ಈ ಆಸ್ಪತ್ರೆ ಮೇಲ್ದರ್ಜೆಗೇರುವ ಸಂದರ್ಭ ಸಿಬ್ಬಂದಿ ಸಮಸ್ಯೆ ಗಳು ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು. ರಾಷ್ಟ್ರೀಯ ಆರೋಗ್ಯ ಮಿಶನ್ನಿಂದ ಮಂಜೂರಾಗಿರುವ ಎಂಆರ್ಐ ಸ್ಕಾನಿಂಗ್ ಸೆಂಟರ್ನ್ನು ಕೂಡಲೇ ಸ್ಥಾಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಕ್ಯಾಂಟಿನ್ ಸಮೀಪದ ಜಾಗದಲ್ಲಿ ನಿರ್ಮಿ ಸಲು ಮಂಜೂರಾಗಿರುವ ಸಾರ್ವಜನಿಕ ಶೌಚಾಲಯ, ಹಣ್ಣು ಹಂಪಲುಗಳ ಅಂಗಡಿಗಳನ್ನು ಒಳಗೊಂಡ ನಾಗರಿಕ ಸೌಲಭ್ಯ ಸಂಕೀರ್ಣಕ್ಕೆ ಅನುದಾನ ಬಿಡುಗಡೆಯಾಗದ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಸಂಕೀರ್ಣ ನಿರ್ಮಾಣಕ್ಕೆ 25ಲಕ್ಷ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಕೆಲವೊಂದು ಮಾರ್ಗಸೂಚಿ ಬದಲಾವಣೆಗೆ ಜನಪ್ರತಿನಿಧಿಗಳು ಸಚಿವರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸಚಿವ ಶ್ರೀರಾಮುಲು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಅಶೋಕ್, ಇಲಾಖೆಯ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿ 3 ತಾಸು ಪೂಜೆ, 2 ಬಾರಿ ಕೃಷ್ಣಮಠ ಭೇಟಿ!
ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವ ಶ್ರೀರಾಮುಲು ಶನಿವಾರ ಮಹಾ ಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮುಂಜಾನೆ ಐದು ಗಂಟೆಗೆ ತನ್ನ ಆಪ್ತ ಸಹಾಯಕನ ಜೊತೆ ಉಡುಪಿ ಕೃಷ್ಣಮಠಕ್ಕೆ ತೆರಳಿ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದರು.
ಬಳಿಕ ಜಿಲ್ಲಾಸ್ಪತ್ರೆಗೆ ಮರಳಿ ಬಂದ ಸಚಿವರು, ತಾನು ವಿಶ್ರಾಂತಿ ಪಡೆದ ಕೊಠಡಿಯ ಎದುರಿನ ಕೊಠಡಿಯಲ್ಲಿ ಮೂರು ಗಂಟೆಗಳ ಕಾಲ ಶಿವಪೂಜೆ ನೆರವೇರಿಸಿದರು. ನಂತರ ಆಸ್ಪತ್ರೆಯಿಂದ ಕೇಸರಿ ತೊಟ್ಟು ಮಠಕ್ಕೆ ಎರಡನೆ ಬಾರಿ ತೆರಳಿದ ಸಚಿವರು, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮಠದ ಚಿನ್ನದ ಗೋಪುರ ವೀಕ್ಷಣೆ ಮಾಡಿದ ಶ್ರೀರಾಮುಲು, ಮುಖ್ಯಪ್ರಾಣ ದೇವರ ಮುಂದೆ ಕೆಲ ನಿಮಿಷಗಳ ಕಾಲ ಧ್ಯಾನ ಮಗ್ನರಾದರು.
ಅಪ್ರಾಮಾಣಿಕ ವೈದ್ಯರ ವಿರುದ್ಧ ಕ್ರಮ
ಸರಕಾರಿ ಆಸ್ಪತ್ರೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಕೆಲವೇ ಕೆಲವು ಮಂದಿಯಿಂದ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ. ಅಂತಹ ವ್ಯಕ್ತಿಗಳನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ವಾಸ್ತವ್ಯ ಹೂಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿ ದ್ದೇನೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಬಡವರು ಬರುವ ಆಸ್ಪತ್ರೆಯನ್ನು ಸುಧಾರಣೆ ಮಾಡಬೇಕು ಮತ್ತು ರೋಗಿ ಗಳಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿ ದ್ದೇನೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಾಯಾ ವಾಚಾ ಮನಸಾ ಕೆಲಸ ಮಾಡಬೇಕು. ಅಲ್ಲಿಯವರೆಗೆ ಸರಕಾರಿ ವೈದ್ಯರ ಬೆನ್ನು ಹತ್ತುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.







