ಯಾರಿಂದಲೂ ದೇಶದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ನಿಜಗುಣ ಪ್ರಭು ಸ್ವಾಮೀಜಿ
ಉಡುಪಿಯಲ್ಲಿ ಸರ್ವ ಜನರ ಸಂವಿಧಾನ ಸಮಾವೇಶ

ಉಡುಪಿ, ಸೆ.28: ಈ ದೇಶದ ಸಂವಿಧಾನವನ್ನು ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನ ಈ ನೆಲದ ಸೊಗಡು. ಸೂರ್ಯ ಚಂದ್ರ ಇರುವವರೆಗೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ಶಾಶ್ವತವಾಗಿ ಇರುತ್ತದೆ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ಪೀಠಾಧ್ಯಕ್ಷ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಉಡುಪಿ ಮಿಶನ್ ಕಂಪೌಂಡ್ನಲ್ಲಿರುವ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸ ಲಾದ ‘ಸರ್ವ ಜನರ ಸಂವಿಧಾನ ಸಮಾವೇಶ’ದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ನಾವು ಇಂದು ದೇಶದ ಜಾತಿವಾದಿಗಳು, ಮತೀಯವಾದಿಗಳು, ಸಂಪ್ರ ದಾಯವಾದಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿಕೊಂಡಿ ದ್ದೇವೆ. ನಮ್ಮನ್ನು ಸೃಷ್ಟಿಸಿರುವ ದೇವರ ಬಗ್ಗೆ ನಮಗೆ ಗೌರವ ಇರಬೇಕು. ಆದರೆ ಮನುಷ್ಯರು ಸೃಷ್ಠಿಸಿರುವ ದೇವರ ಮೇಲಿನ ಭಯವನ್ನು ಬಿಡಬೇಕು ಎಂದರು.
ದಲಿತರನ್ನು ದೇವರ ಹೆಸರಿನಲ್ಲಿ ಮೋಸ ಮಾಡುವ ಹುನ್ನಾರ ನಡೆಯುತ್ತಿದೆ. ಆ ಮೂಲಕ ದಲಿತರ ಹೋರಾಟವನ್ನೇ ಹತ್ತಿಕ್ಕಲಾಗುತ್ತಿದೆ. ದೇಶದ ಬದ ಲಾವಣೆಗೆ ದಲಿತರ ಮನಸ್ಸು ಬದಲಾವಣೆಯೇ ಏಕೈಕ ಅಸ್ತ್ರ. ದೇವರು ಮತ್ತು ಧರ್ಮ ಎಂಬ ಅಂಧಶ್ರದ್ಧೆ ಮತ್ತು ಭಯದಿಂದ ದಲಿತರು ಹೊರಬರಬೇಕು ಎಂದು ಅವರು ಹೇಳಿದರು.
ಈ ದೇಶದಲ್ಲಿ ಪ್ರತಿಯೊಬ್ಬರಿಗೆ ಬುದ್ಧ ತನು ಆಗಬೇಕು, ಬಸವಣ್ಣ ಮನಸ್ಸಾಗ ಬೇಕು ಹಾಗೂ ಅಂಬೇಡ್ಕರ್ ಆತ್ಮವಾಗಬೇಕು. ಆಗ ಮಾತ್ರ ಈ ದೇಶದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣಲು ಸಾಧ್ಯ. ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ಭಯಪಟ್ಟು ಮೇಲ್ವರ್ಗದವರು ದಲಿತರನ್ನು ಪ್ರೀತಿ ಮಾಡಿದರೆ ಹೊರತು, ಹೃದಯದಿಂದ ಯಾರು ಕೂಡ ಪರಿವರ್ತನೆ ಆಗಿಲ್ಲ. ಅಸ್ಪಶ್ಯತೆ ಎಂಬುದು ಬಿಡಲಾರದ ರೀತಿಯಲ್ಲಿ ಅಂಟಿ ಕೊಂಡಿದೆ. ಈ ದೇಶದ ಹಳ್ಳಿ ಹಳ್ಳಿಗಳಲ್ಲಿ ಮತ್ತು ಮನೆ ಮನಗಳಲ್ಲಿಯೂ ಅಸ್ಪಶ್ಯತೆ ಜೀವಂತವಾಗಿದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಭಾರತ ಇಂದು ಸಂಕಟದ ಹಾದಿಯಲ್ಲಿದೆ. ವಿಶ್ವಸಂಸ್ಥೆ ಯಲ್ಲಿ ಶಾಂತಿ ಮಂತ್ರವನ್ನು ಬೋಧಿಸುವವರು, ಭಾರತದಲ್ಲಿ ಬಹುತ್ವವನ್ನು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು ವಿಶ್ವಗುರು ಮಾಡುವ ನೆಪದಲ್ಲಿ ಭಾರತದ ಬಹುತ್ವವನ್ನು ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನದ ಆಶಯಗಳನ್ನು ಕಳೆದುಕೊಂಡರೆ ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಲಿದೆ. ಕೇವಲ ಓಟಿನ ಸಮಾನತೆ ಮಾತ್ರವಲ್ಲ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ನೀಡಬೇಕಾಗಿದೆ. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಸಾಮಾಜಿಕ ಅನ್ಯಾಯಗಳನ್ನು ಪ್ರಶ್ನಿಸುವವರಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುವ ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಎಲ್ಲ ಧರ್ಮೀಯರು, ಭಾಷಿಕರ ಐಕ್ಯತೆಯ ತಳಹದಿ ಮೇಲೆ ನಿಂತಿರುವ ಸಂವಿ ಧಾನದ ಬದಲು ಸರ್ವಾಧಿಕಾರ ಹೇರುವ ಸಂಚು ನಡೆಯುತ್ತಿದೆ ಎಂದರು.
ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹಾದೇವ ಸ್ವಾಮಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ ಮುಖಂಡ ಕೆ.ಎಲ್. ಅಶೋಕ್, ಅಖಿಲ ಭಾರತ ಕ್ರೈಸ್ತ ಒಕ್ಕೂಟದ ಉಡುಪಿ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಉಪನಿರ್ದೇಶಕ ರಮೇಶ್, ದಲಿತ ಮುಖಂಡ ರೋಹಿತಾಕ್ಷ ಕೆ., ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಅವರನ್ನು ಸನ್ಮಾನಿಸ ಲಾಯಿತು.
ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್., ಶಿವಮೊಗ್ಗ ಜಿಲ್ಲಾ ಸಂಚಾಲಕ ಹಾಲೇಶಪ್ಪ, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಸುಂದರ್ ಗುಜ್ಜರಬೆಟ್ಟು, ಮುಖಂಡರಾದ ಶಂಕರ್ದಾಸ್, ರಾಘವ ಕುಕ್ಕುಜೆ, ಲೋಕೇಶ್ ಪಡುಬಿದ್ರಿ, ರಾಘವೇಂದ್ರ, ರಾಜೇಂದ್ರನಾಥ್, ವಿಮಲ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಭಾಸ್ಕರ್ ಮಾಸ್ತರ್ ಸ್ವಾಗತಿಸಿದರು. ಸಮಿತಿ ಸದಸ್ಯ ಶ್ಯಾಮ್ರಾಜ್ ಬಿರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಉಪ್ಪೂರು ವಂದಿಸಿದರು. ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್ನಿಂದ ಸಭಾಂಗಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.
ವೈದಿಕ ತುಷ್ಠಿಕರಣಕ್ಕೆ ದೇಶ ನಾಶ
ಬಹುಸಂಸ್ಕೃತಿಯ ದೇಶದಲ್ಲಿ ಏಕಸಂಸ್ಕೃತಿಯನ್ನು ಹೇರುವ ಮೂಲಕ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ. ಇವರ ವೈದಿಕ ತುಷ್ಠಿಕರಣಕ್ಕೆ ಈ ದೇಶವನ್ನು ಬಲಿಕೊಡಲಾಗುತ್ತಿದೆ. ಜಗತ್ತಿನಲ್ಲಿರುವ ಕಷ್ಟಗಳಿಗೆ ನಮ್ಮ ಬುದ್ದಿ ಮತ್ತು ದುಡಿಮೆಯೇ ಪರಿಹಾರ ಹೊರತು ದೇವರು ಅಲ್ಲ ಎಂದು ನಿಜಗುಣ ಪ್ರಭು ತೋಂಟದಾರ್ಯ ಮಹಾ ಸ್ವಾಮಿ ಹೇಳಿದರು.
ಈ ದೇಶದ ಮೂಲನಿವಾಸಿಗಳಾದ ದಲಿತರು, ದ್ರಾವಿಡ ಸಂಸ್ಕೃತಿಯ ವಾರೀಸುದಾರರು. ಆ ವಿಚಾರಧಾರೆ ನಮ್ಮಲ್ಲಿ ಬರಬೇಕು. ದಲಿತರು ಕೇವಲ ಅಂಬೇಡ್ಕರ್ ನೀಡಿರುವ ಮೀಸಲಾತಿಗಾಗಿ ಅಲ್ಲ, ತಮ್ಮ ಬದುಕುವ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ. ವೈದಿಕ ಆಚರಣೆಯೇ ಶ್ರೇಷ್ಠ ಎಂಬ ಅಜ್ಞಾನದ ಪ್ರಜ್ಞೆ ತೊರೆದು, ಬುದ್ಧನ ಸುಜ್ಞಾನ ಪ್ರಜ್ಞೆ ಬಂದಾಗ ಮಾತ್ರ ದಲಿತರು ಉದ್ದಾರ ಆಗಲು ಸಾ್ಯ ಎಂದು ಅವರು ಅಭಿಪ್ರಾಯ ಪಟ್ಟರು.









