ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕ ಧರಣಿ
ಬೆಂಗಳೂರು, ಸೆ.28: ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನಿಸದ ಕೇಂದ್ರ ಸರಕಾರದ ನಿರ್ಧಾರ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕವು ಸಾಂಕೇತಿಕ ಧರಣಿ ನಡೆಸಿತು.
ಶನಿವಾರ ಪಕ್ಷದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಅಮರನಾಥ್, ಈರುಳ್ಳಿ ಬೆಲೆ ಏರಿಕೆಯಿಂದ ಜನ ಸಾಮಾನ್ಯರು, ಮಧ್ಯಮವರ್ಗದವರು ಪರಿತಪಿಸುವಂತೆ ಆಗಿದೆ. ಕೆಜಿ ಈರುಳ್ಳಿಗೆ 97 ರೂ. ಏರಿಕೆಯಾಗಿದೆ. ಕೇವಲ ಸೇಬು ಹಣ್ಣಿನ ಬೆಲೆ ಇಳಿಕೆಯಾದರೆ, ಅದರಿಂದ ಮನೆಯಲ್ಲಿ ಗೃಹಿಣಿಯರು ಅಡುಗೆ ಮಾಡಲು ಸಾಧ್ಯವಾಗುತ್ತಾ ಎಂದು ಕುಟುಕಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ ವಿದೇಶ ಹಾಗೂ ಅಮೆರಿಕ ಪ್ರವಾಸದಲ್ಲಿದ್ದು ವೈಭೋಗದ ಮಾತುಗಳನ್ನು ಆಡಿದರೆ ಸಾಲದು ದೇಶದ ಜನ ಸಾಮಾನ್ಯರ ಬಗ್ಗೆ ಗಮನಹರಿಸಬೇಕು. ಈರುಳ್ಳಿ ಬೆಲೆ ಏರಿಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಪದಾಧಿಕಾರಿಗಳಾದ ಸಲ್ಮಾ, ಶೋಭಾ ಮತ್ತಿತರರು ಹಾಜರಿದ್ದರು.
Next Story