ಹೆಚ್ಚಿನ ಅಧಿಕಾರ: ಸರ್ಕಾರದ ಕದ ತಟ್ಟಿದ ಚುನಾವಣಾ ಆಯೋಗ

ಹೊಸದಿಲ್ಲಿ: ರಾಜಕೀಯ ಪಕ್ಷಗಳ ನೋಂದಣಿ ರದ್ದುಪಡಿಸುವುದು ಹಾಗೂ ಎರಡು ಕ್ಷೇತ್ರಗಳಿಂದ ಅಭ್ಯರ್ಥಿಗಳು ಸ್ಪರ್ಧಿಸುವುದನ್ನು ತಡೆಯುವುದೂ ಸೇರಿದಂತೆ ಹೆಚ್ಚಿನ ಅಧಿಕಾರ ನೀಡುವಂತೆ ಭಾರತದ ಚುನಾವಣಾ ಆಯೋಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಎರಡು ಪ್ರಮುಖ ಅಧಿಕಾರಗಳನ್ನು ನೀಡುವಂತೆ ಕೋರಿ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ಪಡೆಯುವ ಪ್ರಯತ್ನವನ್ನು ಮತ್ತೆ ಆರಂಭಿಸಿದೆ.
ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಕೂಡಾ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡುವುದು ಕೂಡಾ ಆಯೋಗದ ಪ್ರಸ್ತಾವನೆಯಲ್ಲಿ ಸೇರಿದೆ. ಇಂಥ ವ್ಯಕ್ತಿಗಳು ಒದಗಿಸುವ ಸೇವೆಯ ಸ್ವರೂಪವನ್ನು ಆಧರಿಸಿ, ಅಗತ್ಯ ಸೇವಾ ಕ್ಷೇತ್ರವನ್ನು ನಿರ್ಧರಿಸಲು ಅವಕಾಶವಿರಬೇಕು ಎಂದು ಸ್ಪಷ್ಟಪಡಿಸಿದೆ. ಆರೋಗ್ಯ ಸೇವೆ, ವಿಮಾನಯಾನ ಹಾಗೂ ರೈಲ್ವೆ ವಲಯ ಈ ಸೇವೆಗಳಡಿಯಲ್ಲಿ ಬರುತ್ತವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಸಶಸ್ತ್ರ ಪಡೆಗಳು, ರಾಜ್ಯ ಪೊಲೀಸ್ ಪಡೆ ಹಾಗೂ ವಿದೇಶಗಳಲ್ಲಿ ನಿಯೋಜಿಸಿರುವ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಅಂಚೆ ಮತದಾನ ಮಾಡಲು ಅವಕಾಶವಿದೆ. ಜತೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟವರು ಹಾಗೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಲ್ಪಟ್ಟವರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶವಿದೆ.
ಸಂವಿಧಾನದ ವಿಧಿಗಳಿಗೆ ಅನುಗುಣವಾಗಿ ರಾಜಕೀಯ ಪಕ್ಷಗಳ ನೋಂದಣಿ ರದ್ದುಪಡಿಸಲು ಅವಕಾಶ ನೀಡಬೇಕು ಎಂದು ಭಾರತದ ಚುನಾವಣಾ ಆಯೋಗ ಕಳೆದ ವರ್ಷ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು.